ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಹಳ್ಳಿ ಶಾಲೆಗೆ ಅಧಿಕಾರಿಗಳ ದೌಡು!

ಪ. ರಾಮಕೃಷ್ಣ ಶಾಸ್ತ್ರಿ
Published 4 ಮಾರ್ಚ್ 2024, 0:07 IST
Last Updated 4 ಮಾರ್ಚ್ 2024, 0:07 IST
ಅಕ್ಷರ ಗಾತ್ರ

ಎಲ್ಲ ತಾಲ್ಲೂಕುಗಳ ಕಂದಾಯ ಇಲಾಖೆಯ ಅಧಿಕಾರಿ ಗಳು ವಿದ್ಯುತ್‌ ಸಂಚಲನವಾದ ಹಾಗೆ ಪ್ರತಿ ಗ್ರಾಮಕ್ಕೂ ದೌಡಾಯಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರ ಇಷ್ಟೊಂದು ಕಾಳಜಿ, ಕಾತರ ನೋಡಿದರೆ, ಕುಸಿದು ಬೀಳಲು ಸಜ್ಜಾಗಿರುವ ಶಾಲೆಯ ಚಾವಣಿಗೆ ಕಾಯಕಲ್ಪ ನೀಡಿ, ಹೊಸ ಹೆಂಚು ಹೊದಿಸಿ ಲಕಲಕಿಸುವಂತೆ ಮಾಡುತ್ತಾರೆಯೆ, ಕುಡಿಯುವ ನೀರಿ ಗಾಗಿ ಹೊಸ ತೊಟ್ಟಿ ಕಟ್ಟಿಸುತ್ತಾರೆಯೆ, ಪೀಠೋಪಕರಣ ಗಳು, ಆಟೋಪಕರಣಗಳನ್ನು ಮಂಜೂರು ಮಾಡಲು ಬಂದಿದ್ದಾರೆಯೆ, ಮಳೆಗಾಲದಲ್ಲಿ ನೀರು ಸೋರಿ ನದಿ ಯಂತಾಗುವ ಬಿಸಿಯೂಟ ತಯಾರಿಕೆಯ ಕೊಠಡಿ ನವವಧುವಿನಂತೆ ಶೃಂಗಾರವಾಗುತ್ತಿದೆಯೆ, ಏನಿದು ಚೋದ್ಯ ಎಂದು ಎಲ್ಲರ ಮನಸ್ಸಿನಲ್ಲೂ ಪ್ರಶ್ನೆಗಳು ಮೂಡುತ್ತಿರುವುದು ಸಹಜ.

‘ಮದುವೆ ನಿಶ್ಚಯವಾಗಿಲ್ಲ, ಅದರ ಮೊದಲು ಕಲ್ಯಾಣ ಮಂಟಪ ಹುಡುಕಲು ಹೊರಟರು’ ಎಂಬ ಗಾದೆಯಂತೆ, ತಾಲ್ಲೂಕುಗಳ ಅಧಿಕಾರಿಗಳು ಶಾಲೆಗಳ ಸ್ಥಿತಿಗತಿಯನ್ನು ಸುಧಾರಿಸಿ ಅವುಗಳಿಗೆ ಕಾಯಕಲ್ಪ ನೀಡಲು ಹೀಗೆ ಗುಂಪು ಕಟ್ಟಿಕೊಂಡು ಹೊರಟಿಲ್ಲ. ಶಾಲೆಗಳ ಪರಿಸ್ಥಿತಿ ಶೋಚನೀಯವಾಗಿದೆ, ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ, ಶಾಲೆಯ ಗೋಡೆ ಕುಸಿದು ವಿದ್ಯಾರ್ಥಿಗಳಿಗೆ ತೊಂದರೆಯಾದರೆ ನಮ್ಮನ್ನು ಹೊಣೆ ಮಾಡುತ್ತಾರೆ ಎಂದು ಅಧ್ಯಾಪಕರು ಎಷ್ಟೇ ಬೇಡಿಕೊಂಡರೂ ಅದರತ್ತ ತಲೆಯೆತ್ತಿಯೂ ನೋಡದೆ ಜಾಣಗಿವುಡು ಪ್ರದರ್ಶಿಸಿದ ಅಧಿಕಾರಿಗಳಿಗೆ, ಇದ್ದಕ್ಕಿದ್ದಂತೆ ಯಾಕೆ ಶಾಲೆಗಳನ್ನು ವೀಕ್ಷಿಸಲು ಮನಸ್ಸಾಯಿತು ಎಂಬ ಪ್ರಶ್ನೆ ಮೂಡುತ್ತದೆ.

ಲೋಕಸಭಾ ಚುನಾವಣೆಗೆ ಮುಹೂರ್ತ ಇಟ್ಟಿಲ್ಲ. ಆದರೂ ಕಂದಾಯ ಇಲಾಖೆಯ ಉದ್ಯೋಗಿಗಳು ಪೂರ್ವಭಾವಿಯಾಗಿ ಶಾಲೆಗಳಿಗೆ ಭೇಟಿ ನೀಡು ತ್ತಿರುವುದು, ಮತದಾನಕ್ಕೆ ಆ ಶಾಲೆ ಸಜ್ಜಾಗಿದೆಯೇ ಎಂದು ನೋಡುವುದಕ್ಕಷ್ಟೇ. ಶಿಸ್ತಿನ ಸಿಪಾಯಿಗಳಂತೆ ಚುನಾವಣಾ ಅಧಿಕಾರಿಗಳಿಗೆ ಈ ಬಗೆಗೆ ವರದಿ ನೀಡುವುದು ಮಾತ್ರ ಅವರಿಗಿರುವ ಹೊಣೆ. ಆಮೇಲೆ ಚುನಾವಣಾ ಪ್ರಕ್ರಿಯೆಯಲ್ಲಿ ಶಿಕ್ಷಕರನ್ನು ತೊಡಗಿಸಿಕೊಳ್ಳುವ ಸಂದರ್ಭದಲ್ಲಿಯೂ ಶಿಕ್ಷಕರ ಅನಾರೋಗ್ಯ, ಅಸಹಾಯಕ ಪರಿಸ್ಥಿತಿಗಳಲ್ಲೂ ರಿಯಾಯಿತಿ ತೋರುವುದಿಲ್ಲ. ಬರದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗು ವುದು ಎಂಬ ಎಚ್ಚರಿಕೆ. ಭದ್ರಾವತಿಯ ಒಬ್ಬ ಶಿಕ್ಷಕರಿಗೆ ಕಾಲಿಗೆ ಕಬ್ಬಿಣ ತಗುಲಿ ಗಾಯವಾಗಿ ಗ್ಯಾಂಗ್ರಿನ್‌ ಹಂತ ತಲುಪಿದ್ದರೂ ಚುನಾವಣಾ ಪ್ರಕ್ರಿಯೆಯಿಂದ ವಿಮುಕ್ತಿ ನೀಡಲು ಅಧಿಕಾರಿಗಳು ಒಲ್ಲೆ ಎಂದಿದ್ದರು. ಅದರಿಂದ ಅವರು ಅದೇ ಸ್ಥಿತಿಯಲ್ಲಿ ಕೆಲಸ ಮಾಡಿದರು. ಕಡೆಗೆ ಅವರ ಕಾಲನ್ನೇ ಕತ್ತರಿಸಬೇಕಾಗಿ ಬಂದಿತ್ತು.

ಪಾಠಬೋಧನೆ ಮುಗಿಯದಿದ್ದರೂ ಚುನಾವಣೆ ಬರುತ್ತದೆ ಎನ್ನುವಾಗಲೇ ಶಿಕ್ಷಕರು ಪರೀಕ್ಷೆ
ಗಳನ್ನು ಮುಗಿಸಲು ಸಿದ್ಧರಿರಬೇಕು. ಚುನಾವಣೆಯ ಕೆಲಸಕ್ಕೆ ತಪ್ಪಿಸಿಕೊಳ್ಳುವುದೆಂದರೆ, ಅಧಿಕಾರಿಗಳ ದೃಷ್ಟಿಯಲ್ಲಿ ಅತ್ಯಂತ ಗಂಭೀರವಾದ ಅಪರಾಧ ಎಂಬ ಭಾವನೆಯಿದೆ. ಚುನಾವಣೆ ಕೆಲಸಕ್ಕೆ ಯಾಕೆ ಶಿಕ್ಷಕರನ್ನೇ ಬಳಸಿಕೊಳ್ಳುತ್ತಾರೆ? ಜನಗಣತಿ ಬಂದಾಗಲೂ ಅವರು ಪಾಠ ಮಾಡುವುದು ಬಿಟ್ಟು ಮನೆಮನೆ ಅಲೆಯಬೇಕು. ಜಾತಿ ಗಣತಿ, ಕೋಳಿ ಗಣತಿ ಎಲ್ಲದಕ್ಕೂ ಸುಲಭವಾಗಿ ಸಿಗುವ ಸೇವಕರೆಂದರೆ ಶಿಕ್ಷಕರು ಎಂಬ ಭಾವ ಬೆಳೆದುಬಿಟ್ಟಿದೆ. ಕಂದಾಯ ಇಲಾಖೆಯ ನೌಕರರನ್ನು ತಪ್ಪಿಯೂ ಇದಕ್ಕೆ ಬಳಸುವುದಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯದರ್ಶಿ ಎಂಬ ಹುದ್ದೆ ಧಾರಾಳವಾಗಿ ಸಾಕಾಗು ತ್ತಿದ್ದರೂ ಅಭಿವೃದ್ಧಿ ಅಧಿಕಾರಿ ಎಂಬ ನಿರರ್ಥಕ ಸ್ಥಾನ ವನ್ನು ಸೃಷ್ಟಿಸಲಾಗಿದೆ. ಇವರಲ್ಲಿ ಒಬ್ಬರನ್ನು ಶಿಕ್ಷಕರ ಬದಲಿಗೆ ಚುನಾವಣಾ ಕೆಲಸಗಳಿಗೆ ಬಳಸಿಕೊಳ್ಳ
ಬಹುದಿತ್ತು.

ಚುನಾವಣೆ ನಡೆಯುವ ಸ್ಥಳಕ್ಕೆ ಹಿಂದಿನ ದಿನವೇ ಸೇರಿಕೊಳ್ಳುವ ಶಿಕ್ಷಕರಿಗೆ ಮಲಗಲು ಜಾಗವಿದೆಯೇ ಊಟ ಸಿಗಬಹುದೇ ಶೌಚಾಲಯವಿದೆಯೇ ಶಿಕ್ಷಕಿಯರಿಗೆ ಸೂಕ್ತ ಭದ್ರತೆ ಇದೆಯೇ ಇದಾವುದನ್ನೂ ಅಧಿಕಾರಿಗಳು ಲೆಕ್ಕ ಹಾಕುವುದಿಲ್ಲ. ಅದಕ್ಕೆ ಬೇಕಾದ ವ್ಯವಸ್ಥೆ ಬಗೆಗೆ ಚಿಂತಿಸುವುದಿಲ್ಲ. ಮತದಾನ ಮಾಡಲು ಬೇಕಾದ ಕೋಣೆಗಳಿವೆಯೇ ಎಂಬುದಷ್ಟೇ ಅವರ ಲೆಕ್ಕಾಚಾರ. ಕನಿಷ್ಠಪಕ್ಷ ಶಿಕ್ಷಕರನ್ನು ಚುನಾವಣಾ ಕೆಲಸಕ್ಕೆ ಯಾವುದೋ ಊರಿಗೆ ಕಳುಹಿಸುವ ಬದಲು, ಅವರಿರುವ ಊರಿನಲ್ಲೇ ನಿಯುಕ್ತಿಗೊಳಿಸಿದರೆ ವಸತಿ, ಊಟದ ಸಮಸ್ಯೆಗಾದರೂ ಉತ್ತರ ಸಿಗುತ್ತಿತ್ತು.

ಪ್ರಜಾಪ್ರಭುತ್ವದ ಹೆಮ್ಮೆಯ ಮುಕುಟವಾಗಿರುವ ಚುನಾವಣೆಯ ಮುಖಾಂತರ ಪ್ರಜೆಯ ಅಧಿಕಾರ ಪ್ರಕಟಣೆಗೆ ಸಿಗುವ ಮುಕ್ತ ಅವಕಾಶದ ಕ್ರಮ ಸ್ವಾಗತಾರ್ಹವೇನೋ ನಿಜ. ಆದರೆ ಅದರ ಏರ್ಪಾಡಿನ ಹಿಂದೆ ಶಿಕ್ಷಕ ವರ್ಗದ ಮೇಲೆ ತಾಲ್ಲೂಕಿನಿಂದ ಆರಂಭಿಸಿ ಜಿಲ್ಲಾಧಿಕಾರಿಗಳ ತನಕ ಪ್ರತಿಯೊಬ್ಬರೂ ನೀಡುವ ಒತ್ತಡ ಮಾತ್ರ ನಿಶ್ಚಿಂತ ಶಿಕ್ಷಣ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಬಹುದು.

ಚುನಾವಣೆ ಸನ್ನಿಹಿತವಾಗುವ ಹೊತ್ತಿಗಾದರೂ ಶಿಥಿಲವಾದ ಶಾಲಾ ಕಟ್ಟಡಗಳ ದುರಸ್ತಿಗೆ ಚುನಾಯಿತ ಪ್ರತಿನಿಧಿಗಳು ಮುತುವರ್ಜಿ ವಹಿಸುವುದಿಲ್ಲ. ಆದರೆ ಭವಿಷ್ಯದ ಆಡಳಿತಗಾರರನ್ನು ಗದ್ದುಗೆಗೇರಿಸಲು ಶಾಲೆಗಳು ಬೇಕು. ಸರ್ಕಾರಿ ಶಾಲೆಗಳನ್ನು ಅವ್ಯವಸ್ಥೆಯ ಕೂಪದಿಂದ ಮೇಲಕ್ಕೆತ್ತಲು ಮುಂದಾಗದೆ ಖಾಸಗಿ ವ್ಯವಸ್ಥೆಗಳ ಲಾಭಕ್ಕೆ ಪರೋಕ್ಷವಾಗಿ ಸಹಕರಿಸುತ್ತಲೇ ಬಂದಿರುವ ಜನನಾಯಕರ ಖಯಾಲಿಗೆ ಶಿಕ್ಷಕರು, ಶಿಕ್ಷಣ ವ್ಯವಸ್ಥೆ ತಲೆಬಾಗಬೇಕಾಗಿರುವುದು ವಿಷಾದಕರ ಅಲ್ಲವೆ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT