ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಜನರಿಗೆ ಬೇಕು ವಿದ್ಯುತ್‌ ಉಳಿತಾಯದ ಸೂತ್ರ

ಅಗತ್ಯವಿಲ್ಲದೆ ವಿದ್ಯುತ್‌ ಬಳಕೆ ಮಾಡುವುದಿಲ್ಲ ಎಂಬುದು ಇಂದು ಪ್ರತಿಯೊಬ್ಬರೂ ಪಾಲಿಸಲೇಬೇಕಾದ ಬೀಜಮಂತ್ರವಾಗಬೇಕು
Published 20 ಅಕ್ಟೋಬರ್ 2023, 19:54 IST
Last Updated 20 ಅಕ್ಟೋಬರ್ 2023, 19:54 IST
ಅಕ್ಷರ ಗಾತ್ರ

ಇನ್ನೂ ಬೇಸಿಗೆ ಕಾಲ ಬಂದಿಲ್ಲ. ಅದಕ್ಕಿಂತ ಮೊದಲೇ ಅನಿಯಮಿತ ವಿದ್ಯುತ್‌ ಕಡಿತದ ಶಿಕ್ಷೆ ಆರಂಭವಾಗಿದೆ. ಅದು ಕೂಡ ಸಾಮಾನ್ಯ ಜನರಿಗೆ ಹೆಚ್ಚು ಅಗತ್ಯವಿರುವ ಮುಸ್ಸಂಜೆಯ ಹೊತ್ತನ್ನೇ ಆರಿಸಿಕೊಂಡು ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಉಚಿತ ವಿದ್ಯುತ್‌ ಕೊಡುವುದರಿಂದ ವಿದ್ಯುತ್‌ ಕೊರತೆ ಉಂಟಾಗಿದೆ ಎಂಬ ವಿರೋಧ ಪಕ್ಷಗಳ ಟೀಕೆಯನ್ನು ಬದಿಗೊತ್ತಬೇಕು. ವಿದ್ಯುತ್‌ ಮಿತ ಬಳಕೆಯ ಸೂತ್ರವೊಂದನ್ನು ರಚಿಸುವ ಮೂಲಕ, ಲಭ್ಯವಿರುವ ವಿದ್ಯುತ್ತನ್ನು ಹೆಚ್ಚು ಬಳಸುವ ನೀತಿ ಸೂತ್ರವೊಂದು ಇಂದು ಅಗತ್ಯವಿದೆ ಎನಿಸುತ್ತದೆ.

ಜಲ ವಿದ್ಯುತ್ತನ್ನೇ ನಂಬಿದರೆ ಈ ವರ್ಷ ಮಳೆಯ ಕೊರತೆಯಿಂದ ಅದು ಲಭ್ಯವಾಗಲಾರದು. ಕೃಷಿಗೆ ಉಚಿತವಾಗಿ ವಿದ್ಯುತ್‌ ಪೂರೈಸಲಾಗುತ್ತಿದೆ. ಅನೇಕ ತೋಟಗಳಲ್ಲಿ ಅನಗತ್ಯವಾಗಿ ಹಗಲು, ರಾತ್ರಿ ಬಿಡದೆ ಪಂಪುಗಳು ಕೊಳವೆಬಾವಿಯ ನೀರನ್ನು ಉಗುಳುತ್ತಲೇ ಇರುತ್ತವೆ. ತೋಟದಲ್ಲಿ ತುಂಬಿದ ನೀರು ಮತ್ತೆ ಕೆರೆಗೋ ಚರಂಡಿಗೋ ಹರಿದುಹೋದರೂ ಪಂಪುಗಳು ಸ್ತಬ್ಧವಾಗುವುದಿಲ್ಲ. ಕೃಷಿಗೆ ಬಳಸುವ ವಿದ್ಯುತ್ತಿಗೆ ಕಾಲಮಿತಿಯನ್ನು ಹೇರುವ ಮೂಲಕ ರೈತರು ಜವಾಬ್ದಾರಿಯುತವಾಗಿ ಅದರ ಸದುಪಯೋಗ ಮಾಡಲು ಸಲಹೆ ನೀಡುವುದು ಉಚಿತ ಎನಿಸುತ್ತದೆ.

ಪಟ್ಟಣಗಳಲ್ಲಿ ಹಲವಾರು ಪ್ರದರ್ಶನಾಲಯಗಳು ರಾತ್ರಿ ತಮ್ಮ ನಾಮಫಲಕ ಎದ್ದು ಕಾಣಬೇಕೆಂದು ಬಣ್ಣಬಣ್ಣದ ಬಲ್ಬುಗಳನ್ನು, ಮಿನಿಯೇಚರ್‌ಗಳನ್ನು ಬಳಸಿ ಝಗಮಗಿಸುವಂತೆ ಮಾಡುತ್ತವೆ. ವ್ಯಾಪಾರ ಮುಗಿಸಿ ಅಂಗಡಿ ಬಾಗಿಲು ಹಾಕಿದ ಮೇಲೂ ಅಷ್ಟೊಂದು ದೀಪಗಳು ಬೆಳಗುತ್ತಲೇ ಇರುವುದು ಅನಿವಾರ್ಯವೇ? ಅದಕ್ಕೊಂದು ಮಿತಿ ಹೇರಿದರೆ ವಿದ್ಯುತ್‌ ಉಳಿಸಬಹುದಲ್ಲವೇ? ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಬೀದಿ ದೀಪಗಳನ್ನು ಅಳವಡಿಸಿ, ಬೆಳಗಾಗುವವರೆಗೂ ಉರಿಸಲಾಗುತ್ತದೆ. ಇಲ್ಲಿ ಜನಸಂಚಾರ
ರಾತ್ರಿಯಿಡೀ ಇರುವುದಿಲ್ಲ. ಜನರಿಗೆ ಅವಶ್ಯವಿರುವಷ್ಟು ಸಮಯ ಮಾತ್ರ ಇಂತಹ ದೀಪಗಳನ್ನು ಉರಿಸಬಹುದಲ್ಲವೇ?

ವರ್ಷಗಳ ಹಿಂದೆ ಇಂಧನ ಇಲಾಖೆ ಮಿತ ಬೆಲೆಯ ಎಲ್‌ಇಡಿ ಬಲ್ಬುಗಳನ್ನು ಗ್ರಾಹಕರಿಗೆ ನೀಡುವ ಪದ್ಧತಿ ಇತ್ತು. ಈಗ ಅದನ್ನು ಕೈಬಿಟ್ಟಿದೆ. ವಿದ್ಯುತ್‌ ಉಳಿತಾಯಕ್ಕೆ ಇಂತಹ ಬಲ್ಬುಗಳು ಸಹಾಯಕ. ಸಾಮಾನ್ಯ ಬಲ್ಬುಗಳಿಗೆ ಬೆಲೆ ಕಮ್ಮಿಯಾದರೂ ವಿದ್ಯುತ್‌ ದುರ್ವ್ಯಯವಾಗುತ್ತದೆ. ಮತ್ತೆ ಇಂಧನ ಇಲಾಖೆ ಎಲ್‌ಇಡಿ ಬಲ್ಬುಗಳನ್ನು ಮನೆಮನೆಗಳಿಗೂ ಒದಗಿಸಿ ಬಹಳಷ್ಟು ಪ್ರಮಾಣದಲ್ಲಿ ವಿದ್ಯುತ್‌ ಉಳಿಸಲು ಪ್ರಯತ್ನಿಸಬಹುದು.

ಮನೆಗಳಲ್ಲಿ ಸೌರಶಕ್ತಿಯ ಬಿಸಿನೀರಿನ ಘಟಕ ಸ್ಥಾಪಿಸಿದವರಿಗೆ ವಿದ್ಯುತ್‌ ಬಿಲ್‌ನಲ್ಲಿ ಗರಿಷ್ಠ ಐವತ್ತು ರೂಪಾಯಿಗಳಷ್ಟು ರಿಯಾಯಿತಿ ನೀಡಲಾಗುತ್ತದೆ. ವಾಸ್ತವವಾಗಿ ಮನೆಗಳಲ್ಲಿ ಸೌರವಿದ್ಯುತ್‌ ಹೆಚ್ಚು ಬಳಸುವವರಿಗೆ ಇಂತಹ ಪ್ರೋತ್ಸಾಹಧನ ಸಿಕ್ಕಿದರೆ ಅನುಕೂಲವಾಗುತ್ತಿತ್ತು. ಉಚಿತವಾಗಿ ವಿದ್ಯುತ್‌ ನೀಡುವುದಕ್ಕಿಂತಲೂ ಬಳಕೆದಾರರಿಗೆ ಸೌರಶಕ್ತಿ ಉತ್ಪಾದನೆಗೆ ಸಂಪೂರ್ಣ ನೆರವು ನೀಡಿದ್ದರೆ ಶಾಶ್ವತವಾಗಿ ಮನೆ ಬೆಳಗುವಷ್ಟು ವಿದ್ಯುತ್‌ ಯಾವುದೇ ಶ್ರಮವಿಲ್ಲದೆ ಪ್ರಾಪ್ತವಾಗುತ್ತಿತ್ತು. ಸೌರಶಕ್ತಿ ಫಲಕಗಳ ಬೆಲೆ
ದುಬಾರಿಯಾಗಿರುವುದರಿಂದ ಸರ್ಕಾರ ಇತ್ತ ಗಮನಹರಿಸಬಹುದು.

ಮಲೆನಾಡಿನ ಅನೇಕ ಕಡೆ ಎತ್ತರದಿಂದ ಹರಿದುಬರುವ ನೀರಿನಿಂದ ಸುಲಭವಾಗಿ ವಿದ್ಯುತ್‌ ಉತ್ಪಾದಿಸುವ ಸಾಧ್ಯತೆಯಿದ್ದರೂ ಹಣಕಾಸಿನ ಕೊರತೆ ಹಾಗೂ ಮಾರ್ಗದರ್ಶನ ಲಭಿಸದಿರುವ ಕಾರಣ ಹಲವರು ಅದರ ಲಾಭ ಪಡೆಯಲು ಸಾಧ್ಯವಾಗದೇ ಹೋಗಿದೆ. ಗ್ರಾಮೀಣ ಜನರು ಇಂತಹ ಅಯಾಚಿತ ವಿದ್ಯುತ್‌ ಉತ್ಪಾದಿಸಲು ಸರ್ಕಾರ ಸಂಪೂರ್ಣ ವೆಚ್ಚವನ್ನು ಒದಗಿಸಿದರೂ ಭವಿಷ್ಯದ ವಿದ್ಯುತ್‌ ಸ್ವಾವಲಂಬನೆಗೆ ಇದರಿಂದ ಸಹಾಯವಾಗುತ್ತದೆ.

ಅಗತ್ಯವಿಲ್ಲದೆ ವಿದ್ಯುತ್‌ ಬಳಕೆ ಮಾಡುವುದಿಲ್ಲ ಎಂಬುದು ಇಂದು ಪ್ರತಿಯೊಬ್ಬರೂ ಪಾಲಿಸಲೇಬೇಕಾದ ಬೀಜಮಂತ್ರವಾಗಬೇಕು. ಕಚೇರಿಗಳಲ್ಲಿ ಪಂಖಗಳು ತಿರುಗುತ್ತಲೇ ಇರುತ್ತವೆ, ಕೊಠಡಿಯೊಳಗೆ ಯಾರೂ ಇಲ್ಲದಿದ್ದಾಗಲೂ. ಮಧ್ಯಾಹ್ನ ಊಟದ ಬಿಡುವಿನಲ್ಲಿ ನೌಕರರು ಹೊರಗೆ ಹೋಗಿದ್ದರೂ ಗಾಳಿ ಪಂಖ ಮೌನವಾಗುವುದಿಲ್ಲ. ಇಂತಹ ಕಚೇರಿಗಳಲ್ಲಿ ಬಳಸುವ ವಿದ್ಯುತ್ತಿಗೂ ಪರಿಮಿತಿ ಹೇರಬಹುದು. ಮಠ ಮಂದಿರಗಳು ಕೂಡ ಜನ ಬರುವ ಸಮಯ ಕಳೆದ ಮೇಲೂ ದೀಪಾಲಂಕಾರಗಳನ್ನು ಹಾಗೆಯೇ ಉಳಿಸುವ ಔಚಿತ್ಯವಾದರೂ ಏನಿದೆ?

ವಿದ್ಯುತ್‌ ಲಭ್ಯವಿರುವಾಗ ಉಳ್ಳವರು ಬ್ಯಾಟರಿಗಳ ಮೂಲಕ ಸಂಗ್ರಹ ಮಾಡಿಕೊಳ್ಳುತ್ತಾರೆ. ಆದರೆ ಅಂತಹ ಅನುಕೂಲವಿಲ್ಲದ ದುಡಿಯುವ ಮಂದಿಗೆ ತುಂಬ ತೊಂದರೆಯಾಗುತ್ತದೆ. ಹಳ್ಳಿಗಳಲ್ಲಿ ಸರ್ಕಾರ ಭಾಗ್ಯಜ್ಯೋತಿಯ ಹೆಸರಿನಲ್ಲಿ ನೀಡುತ್ತಿದ್ದ ಉಚಿತ ವಿದ್ಯುತ್‌ ಸೌಲಭ್ಯವೂ ದುರುಪಯೋಗವಾಗುತ್ತಿತ್ತು. ವಿದ್ಯುತ್‌ ಇಲಾಖೆಯ ಅಧಿಕಾರಿಗಳು ಜಾಗೃತರಾದರೆ ವಿದ್ಯುತ್‌ ಕಳ್ಳತನವನ್ನು ತಡೆಯಬಹುದು.

ಮನೆಯ ಚಾವಣಿಗಳಲ್ಲಿ ವಿದ್ಯುತ್‌ ಉತ್ಪಾದನೆ ಮಾಡುವವರಿಗೆ ಸಹಾಯಧನ ನೀಡುವುದರ ಜೊತೆಗೆ ಉತ್ಪಾದಿಸಿದ ವಿದ್ಯುತ್ತನ್ನು ಯೋಗ್ಯ ಬೆಲೆಗೆ ಖರೀದಿ ಮಾಡುವ ಯೋಜನೆ ನಮ್ಮಲ್ಲಿ ಕಾರ್ಯರೂಪಕ್ಕೆ ಬಂದಿತ್ತು. ಆದರೆ ವರ್ಷಗಳು ಕಳೆಯುತ್ತಿದ್ದಂತೆ ಈ ಖರೀದಿಯ ದರವನ್ನು ಇಳಿಸಲಾಗಿದೆ. ಬ್ಯಾಂಕುಗಳಿಂದ ಸಾಲ ಪಡೆದು ವಿದ್ಯುತ್‌ ಉತ್ಪಾದಕ ಘಟಕ ಸ್ಥಾಪಿಸಿದವರಿಗೆ ಈಗ ಬರುವ ಹಣ ಬ್ಯಾಂಕಿನ ಕಂತು ತುಂಬಲೂ ಸಾಕಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಪರಿಸರಕ್ಕೆ ಹಾನಿ ತರದ ಸೌರ ವಿದ್ಯುತ್‌ ಉತ್ಪಾದನೆಯ ಹಲವಾರು ಘಟಕಗಳನ್ನು ಗ್ರಾಮಗಳಲ್ಲಿ ಸ್ಥಾಪಿಸುವುದರ ಮೂಲಕ ವಿದ್ಯುತ್‌ ಕೊರತೆಗೆ ಉತ್ತರ ಕಂಡುಕೊಳ್ಳಬಹುದು. ಇದರಿಂದ ವಿದ್ಯುತ್‌ ಸಾಗಣೆ ಸಮಯದಲ್ಲಿ ಸಂಭವಿಸುವ ಸೋರಿಕೆಯೂ ತಗ್ಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT