ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮೌಲ್ಯಮಾಪನ: ಶೈಕ್ಷಣಿಕ ಅನುಸಂಧಾನ

ಶಿಕ್ಷಕರ ಪಾಲಿಗೆ ಮೌಲ್ಯಮಾಪನ ಶಿಬಿರ ಒಂದು ಅನುಭವ ಮಂಟಪ
Last Updated 18 ಏಪ್ರಿಲ್ 2023, 22:45 IST
ಅಕ್ಷರ ಗಾತ್ರ

ಉತ್ತರಪತ್ರಿಕೆಗಳ ಮೌಲ್ಯಮಾಪನ ಪರೀಕ್ಷೆಯ ನಿರ್ಣಾಯಕ ಘಟ್ಟ. ಅದು ವಿದ್ಯಾರ್ಥಿಗಳಲ್ಲಿ, ಅವರಿಗಿಂತ ಹೆಚ್ಚಾಗಿ ಪೋಷಕರಲ್ಲಿ ಸಂಚಲನ ಸೃಷ್ಟಿಸುವ ಶೈಕ್ಷಣಿಕ ಮಜಲು. ಬದುಕಿಗಿಂತಲೂ ಮಹತ್ವದ ಪರೀಕ್ಷೆಯಿಲ್ಲ ಎನ್ನುವುದು ಸ್ಪಷ್ಟ. ಮೂರು ತಾಸುಗಳ ಪರೀಕ್ಷೆಯಿಂದ ಜ್ಞಾನಮಟ್ಟ ಅಳತೆ ಮಾಡಲಾಗದು, ಏನಿದ್ದರೂ ಅದು ನೆನಪಿನ ಸಾಮರ್ಥ್ಯದ ಮಾಪನವಷ್ಟೆ ಎನ್ನುವ ಟೀಕೆಗೆ ಅರ್ಥವಿದೆ. ಆದರೆ ಆಯಾ ವ್ಯಾಸಂಗ ವರ್ಷದಲ್ಲಿ ಗಳಿಸಿದ ಅರಿವನ್ನು ತೂಗಿ ನೋಡಲು ಪರೀಕ್ಷೆಯೇ ಇದ್ದುದರಲ್ಲಿ ತಕ್ಕಡಿ. ಪರ್ಯಾಯ ಕಂಡುಕೊಳ್ಳುವವರೆಗೆ ಪರೀಕ್ಷೆಯೇ ಮುಂದುವರಿಯುವುದು ಅನಿವಾರ್ಯ.

ಯಾವುದೇ ಪಬ್ಲಿಕ್‌ ಪರೀಕ್ಷೆಗೆ ಸಂಬಂಧಿಸಿದಂತೆ ಆರು ದಶಕಗಳಿಗೂ ಹಿಂದೆ ‘ಕೇಂದ್ರೀಯ ಮೌಲ್ಯಮಾಪನ’ ಎನ್ನುವುದಿರಲಿಲ್ಲ. ಪರೀಕ್ಷೆಗೆ ಕೂರುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆಯೂ ಆಗ ಬಹಳ ಕಡಿಮೆಯಿತ್ತು. ಉತ್ತರಪತ್ರಿಕೆಗಳು ಆಯಾ ಅಧ್ಯಾಪಕರ ಮನೆಮನೆಗಳಲ್ಲೇ ಮೌಲ್ಯಮಾಪನಗೊಳ್ಳುತ್ತಿದ್ದವು. ಅವರಿಗೆ ಸಂದೇಹಗಳು ಬಂದರೆ ಹಿರಿಯ ಪರೀಕ್ಷಕರನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳುತ್ತಿದ್ದರು. ಮೆಚ್ಚುಗೆಯ ಅಂಶವೆಂದರೆ, ಎಲ್ಲ ಹಂತಗಳಲ್ಲೂ ಪ್ರಾಮಾಣಿಕತೆ, ಗೋಪ್ಯತೆ ಇರುತ್ತಿತ್ತು. ನಂತರ ವಿಷಯಾನುಕ್ರಮದಲ್ಲಿ ವಿವಿಧ ಊರುಗಳಲ್ಲಿ ಮೌಲ್ಯಮಾಪನ ಕೇಂದ್ರಗಳನ್ನು ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯಗಳು ವ್ಯವಸ್ಥಿತವಾಗಿ ಆಯೋಜಿಸತೊಡಗಿದವು.

ಸುಮಾರು 10- 12 ದಿನಗಳವರೆಗೆ ಅಗತ್ಯ ಭದ್ರತೆಯಲ್ಲಿ ಮೌಲ್ಯಮಾಪನ ಶಿಬಿರಗಳು ಏರ್ಪಡುತ್ತವೆ. ದಿನಕ್ಕೆ ಇಷ್ಟು ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡಬೇಕೆಂಬ ನಿಯಮವಿದೆ. ಈ ಕ್ರಮಬದ್ಧತೆಯಿಂದ ಯಜ್ಞಸದೃಶವಾಗಿ ಮೌಲ್ಯಮಾಪನ ಕಾರ್ಯ ನೆರವೇರುವುದು. ಒಂದರ್ಥದಲ್ಲಿ ವಿದ್ಯಾರ್ಥಿ ಗಳ ಪರೀಕ್ಷೆಯಾದ ನಂತರ ಇದೀಗ ಶಿಕ್ಷಕರಿಗೆ ಪರೀಕ್ಷೆ ಎನ್ನೋಣ. ಈ ಪವಿತ್ರ ಕಾರ್ಯದಲ್ಲಿ ಸ್ವಯಂ ಆದೇಶಾತ್ಮಕವಾಗಿ ಶಿಕ್ಷಕರು ತಪ್ಪದೇ ಪಾಲ್ಗೊಳ್ಳಬೇಕು. ಹೊಸದಾಗಿ ಶಿಕ್ಷಕ ಹುದ್ದೆಗೆ ಸೇರಿದವರಿಗಂತೂ ಮೌಲ್ಯಮಾಪನ ಶಿಬಿರ ಹಲವಾರು ಶೈಕ್ಷಣಿಕ ಸಂಗತಿಗಳನ್ನು ಕಲಿಸುವ ವಿಶಿಷ್ಟ ಕಾರ್ಯಾಗಾರ.

ವಿದ್ಯಾರ್ಥಿಗಳ ಎಲ್ಲ ಉತ್ತರಗಳನ್ನೂ ಒಂದೂ ಬಿಡದಂತೆ ಗಮನವಹಿಸಿ ಓದಿಯೇ ಸೂಕ್ತ ಅಂಕ ನೀಡಿದರೆ ಮೌಲ್ಯಮಾಪನಕ್ಕೆ ಘನತೆ, ನ್ಯಾಯ. ಒಂದು ಉತ್ತರ ಅಂಕ ನಿಗದಿಗೇ ಅನರ್ಹ ಎಂದಾದರೂ ಅದನ್ನೂ ಮೌಲ್ಯಮಾಪನ ಮಾಡಬೇಕು. ಅದಕ್ಕೆ ಸಲ್ಲಬೇಕಾದ ‘ಸೊನ್ನೆ’ಯನ್ನು ನೀಡಲೇಬೇಕು, ನಮೂದಿಸಲೇಬೇಕು. ಸೊನ್ನೆಯೂ ಒಂದು ಅಂಕವೇ. ಉತ್ತರಪತ್ರಿಕೆಯ ಒಳಗೆ ನಮೂದಿಸಿದ ಅಂಕಗಳ ಮತ್ತು ಮೇಲೆ ನಮೂದಿಸಿದ ಅಂಕಗಳ ಮೊತ್ತ ಒಂದೇ ಇರುವುದು ಮೇಲ್ನೋಟಕ್ಕೆ ಮೌಲ್ಯಮಾಪನದ ನಿಖರತೆಯನ್ನು ಬಿಂಬಿಸುತ್ತದೆ. ಒಂದೆರಡು ಅಂಕ ಹೆಚ್ಚಾದರೂ ಅಡ್ಡಿಯಿಲ್ಲ ಕಡಿಮೆ ಅಂಕ ಬೇಡ ಎನ್ನುವುದು ಹಿರಿಯರ ಅನುಭವದ ಹಿತನುಡಿ.

ಗಡಿಬಿಡಿಯಿಂದ ಏನನ್ನೂ ಸಾಧಿಸಲಾಗದು. ಅನ್ನ ಬೇಯಲು, ಹಾಲು ಉಕ್ಕಲು ಅಥವಾ ಹಿಟ್ಟು ನಾದಲು ಅದರದೇ ಸಮಯ ಅಗತ್ಯ. ನಿಧಾನವೇ ಪ್ರಧಾನವಾಗಿ ಮೌಲ್ಯಮಾಪನ ಆಗಬೇಕಿದೆ. ಅವಸರವು ಮೌಲ್ಯಮಾಪನದ ಕಡುವೈರಿ. ಒಂದೊಂದು ಉತ್ತರ ಪತ್ರಿಕೆಯೂ ಭಿನ್ನ, ಅವುಗಳಲ್ಲಿನ ಒಂದೊಂದು ಉತ್ತರವೂ ಭಿನ್ನ.‌ ಮೌಲ್ಯಮಾಪಕರಿಗೆ ಸವಾಲಾಗದ ಸಂದರ್ಭವೇ ಇರದು. ಪ್ರಶ್ನೆಗಳಿಗಿಂತ ಉತ್ತರಗಳನ್ನು ಎದುರಿಸುವುದು ಕಠಿಣ!

ಮೌಲ್ಯಮಾಪನ ಪ್ರಾರಂಭಗೊಳ್ಳುವ ಒಂದು ವಾರ ಮುನ್ನವೇ ಪ್ರಶ್ನೆಪತ್ರಿಕೆಯನ್ನು ಆಮೂಲಾಗ್ರವಾಗಿ ಓದಿ ಮನನ ಮಾಡಿಕೊಂಡರೆ ಆತ್ಮವಿಶ್ವಾಸದಿಂದಲೂ ನಿರಾಯಾಸವಾಗಿಯೂ ಉತ್ತರಪತ್ರಿಕೆಗಳೊಂದಿಗೆ ಅನುಸಂಧಾನಿಸಬಹುದು. ಮುಖ್ಯ ಪರೀಕ್ಷಕರು ನೀಡುವ ‘ಸ್ಕೀಂ’ (ಅಂಕ ನಿಗದಿ ಮಾರ್ಗಸೂಚಿ) ಆದೇಶಕ್ಕಿಂತಲೂ ಕರ್ತವ್ಯ ನಿರ್ವಹಣೆಗೆ ಪೂರಕ. ದಿನೇ ದಿನೇ ಮೌಲ್ಯಮಾಪನ ತಂತಾನೆ ವೇಗ ಪಡೆದು ಕೊಳ್ಳುವುದು. ಇಡೀ ಶಿಬಿರ ಒಂದು ಮನೆಯೇ ಆಗುವುದು.

ಶಿಕ್ಷಕರು ಉತ್ತರಪತ್ರಿಕೆಗಳಲ್ಲಿ ತಮಗೆ ಬಂದ ಚಿತ್ರ ವಿಚಿತ್ರ ಮನವಿಗಳನ್ನು ಹಂಚಿಕೊಳ್ಳುತ್ತಾರೆ: ‘ದಯವಿಟ್ಟು 35 ಅಂಕ ನೀಡಿ, ನೀವೇನೂ ಕಳೆದುಕೊಳ್ಳುವುದಿಲ್ಲ. ಆದರೆ ನನಗದು ಅದೃಷ್ಟವೋ ಅದೃಷ್ಟದ ಬಾಗಿಲು...’, ‘ನನ್ನನ್ನು ಪಾಸು ಮಾಡಿದರೆ ನಿಮಗುಂಟು ಭಾರಿ ಬಹುಮಾನ’... ಹೀಗೆ. ಪಾಸಿಗಾಗಿ ಗೋಗರೆದು ಒಂದೆರಡು ನೋಟುಗಳನ್ನು ಲಗತ್ತಿಸುವುದೂ ಸಂಭಾವ್ಯ. ಇವರು ಇಷ್ಟೆಲ್ಲ ಜಾಣತನ ಮೆರೆಯುವ ಬದಲು ತುಸು ಶ್ರಮವಹಿಸಿ ಓದಿಕೊಳ್ಳಬಹುದಿತ್ತಲ್ಲ ಎಂಬ ಪ್ರಶ್ನೆ ಸಹಜ.

ಅಂದಹಾಗೆ ಕೆಲವು ವಿದ್ಯಾರ್ಥಿಗಳು ಬರೆಯುವ ಉತ್ತರಗಳು ಮೌಲ್ಯಮಾಪಕರಿಗೆ ಜ್ಞಾನವರ್ಧಿಸುವಂತೆಯೂ ಇರುತ್ತವೆ. ವಿಶೇಷವಾಗಿ ವಿಜ್ಞಾನ ವಿಷಯಗಳಲ್ಲಿ ಪ್ರಮೇಯ, ವ್ಯುತ್ಪನ್ನಗಳಿಗೆ ಸಂಬಂಧಿಸಿದ ಲೆಕ್ಕಾಚಾರಗಳು ಹೀಗೂ ಸಾಧ್ಯವಲ್ಲ ಎಂದು ಖುಷಿ, ಅಚ್ಚರಿ ಮೂಡಿಸುತ್ತವೆ. ಹಾಗಾಗಿ ಅಂಕ ನಿಗದಿಗೆ ತೆರೆದುಕೊಂಡ ವಿದ್ಯಾರ್ಥಿಗಳ ಬರಹ ಶಿಕ್ಷಕರಿಗೆ ಹೊಸ ಹೊಸ ಅರಿವು ಮೂಡಿಸುವುದು ಅತಿಶಯವೇ ಹೌದು. ಬಹು ಎಚ್ಚರಿಕೆಯಿಂದ, ಚಿನ್ನ ತೂಕ ಮಾಡಿದಂತೆ ಮೌಲ್ಯಮಾಪನ ಕಾರ್ಯ ನಿರ್ವಹಿಸದಿದ್ದರೆ ಅದರ ದುಷ್ಪರಿಣಾಮಕ್ಕೆ ಗುರಿಯಾಗುವವರು ವಿದ್ಯಾರ್ಥಿಗಳು, ಪೋಷಕರು. ಇಡೀ ಸಮಾಜದ ಮೇಲೆಯೆ ಬೇಜವಾಬ್ದಾರಿಯುತ ಮೌಲ್ಯಮಾಪನದ ಕೆಟ್ಟ ಛಾಯೆ ಆವರಿಸುತ್ತದೆ. ಅಲಕ್ಷ್ಯದ ಅಂಕ ನಿಗದಿಯಿಂದ ಬುದ್ಧಿವಂತರು ದಡ್ಡರೆಂಬ, ದಡ್ಡರು ಬುದ್ಧಿವಂತರೆಂಬ ತಪ್ಪು ಸಂದೇಶ ಹೊರಬೀಳುವುದು.

ಉತ್ತರಪತ್ರಿಕೆಯ ಖಾಲಿ ಹಾಳೆಗಳನ್ನು ತಪ್ಪದೇ ಹೊಡೆದು ಹಾಕದಿರುವುದೂ ದೊಡ್ಡ ಲೋಪವೇ. ಏಕೆಂದರೆ ಆ ಹಾಳೆಗಳ ದುಬರ್ಳಕೆ ಸಾಧ್ಯ. ಅಂಕಗಳೇ ಮಾನದಂಡವಲ್ಲ ಎನ್ನುವ ಮಾತು ಬೇರೆ. ಉತ್ತರ ಪತ್ರಿಕೆಗಳಲ್ಲಿ ಯಾವುದೇ ಅಕ್ರಮಗಳು ಕಂಡುಬಂದರೆ ಮುಖ್ಯ ಮೌಲ್ಯಮಾಪಕರಿಗೆ ಮೌಲ್ಯಮಾಪಕರು ವರದಿ ಸಲ್ಲಿಸಬೇಕಾಗುತ್ತದೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT