ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಮಹಿಳಾ ಧೀಮಂತಿಕೆಯ ದ್ಯೋತಕ

ಸಂಪೂರ್ಣ ಸಮಾನತೆ ಸಾಧಿಸುವ ಭಾರತೀಯ ಮಹಿಳೆಯರ ಆಶಯಕ್ಕೆ ಗಟ್ಟಿಯಾದ ತಳಹದಿ ಹಾಕಿದ ಸಾವಿತ್ರಿಬಾಯಿ ಫುಲೆ ಅವರನ್ನು ಕೃತಜ್ಞತೆಯಿಂದ ನೆನೆಯಬೇಕಾದ ಹೊತ್ತು ಇದು
Last Updated 31 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಇಂದಿನ ಭಾರತೀಯ ಮಹಿಳೆ ಸ್ಮರಿಸಬೇಕಾದ ಎರಡು ಮುಖ್ಯ ದಿನಾಚರಣೆಗಳೆಂದರೆ, ಮಾರ್ಚ್ 8 ಮತ್ತು ಜನವರಿ 3. ಅಂತರರಾಷ್ಟ್ರೀಯ ಮಟ್ಟದಲ್ಲಿ, ಮಹಿಳಾ ಹಕ್ಕು ಮತ್ತು ಸ್ವಅರಿವಿನ ಜಾಗೃತಿ ಹುಟ್ಟಿಸಿದ ಚಳವಳಿಯ ದ್ಯೋತಕವಾಗಿ ಮಾರ್ಚ್ 8 ವಿಶ್ವ ಮಹಿಳಾ ದಿನವಾಗಿ ಆಚರಿಸಲ್ಪಟ್ಟರೆ, ದೇಶದ ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರದ ದಾರಿದೀಪ ತೋರಿಸಿದ ‘ಭಾರತದ ಮೊದಲ ಶಿಕ್ಷಕಿ’ ಸಾವಿತ್ರಿಬಾಯಿ ಫುಲೆಯವರ ಜನ್ಮದಿನವಾದ ಜನವರಿ 3, ಅಷ್ಟೇ ಆತ್ಮೀಯವಾಗಿ ನೆನಪಿಸಿಕೊಳ್ಳ
ಬೇಕಾದ ದಿನ.

1831ರ ಜನವರಿ 3ರಂದು ಮಹಾರಾಷ್ಟ್ರದ ನಾಯಗಾಂವ್‌ನಲ್ಲಿ ಹಿಂದುಳಿದ ಮಾಲಿ ಸಮುದಾಯದ ರೈತ ಕುಟುಂಬದಲ್ಲಿ ಜನಿಸಿದ ಸಾವಿತ್ರಿಬಾಯಿ, ಇಂದು ದೇಶದಾದ್ಯಂತ ಪರಿಚಿತ ಹೆಸರಾಗಲು ಅವರ ಪತಿ, ಧೀಮಂತ ಸಮಾಜ ಸುಧಾರಕ, ಜ್ಯೋತಿರಾವ್ ಫುಲೆ ಅವರ ಕೊಡುಗೆ ವಿಶಿಷ್ಟವಾದುದು. ಶಿಕ್ಷಣದ ಮೂಲಕ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಬಹುದೆಂಬ ತಮ್ಮ ನಂಬಿಕೆಯನ್ನು ಜ್ಯೋತಿಬಾ,
ಅನಕ್ಷರಸ್ಥೆಯಾಗಿದ್ದ ಪತ್ನಿಗೆ ಮನೆಯವರ ವಿರೋಧದ ನಡುವೆಯೂ ಅಕ್ಷರಾಭ್ಯಾಸ ಮಾಡಿಸುವುದರ ಮೂಲಕ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದರು.

ಜ್ಯೋತಿಬಾ ಬೆಂಬಲದೊಂದಿಗೆ ಪುಣೆಯ ಶಿಕ್ಷಕ ತರಬೇತಿ ಸಂಸ್ಥೆ ಸೇರಿದ ಸಾವಿತ್ರಿಬಾಯಿ, ಆನಂತರ ತಮ್ಮ ಮನೆಯಿಂದಲೇ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲಾರಂಭಿಸಿದರು. ಬಳಿಕ ದಂಪತಿ 1848ರಲ್ಲಿ ಭಿಡೆವಾಡದಲ್ಲಿ ‘ಭಾರತದ ಪ್ರಥಮ ಬಾಲಕಿಯರ ಶಾಲೆ’ಯನ್ನು ಸ್ಥಾಪಿಸಿದರು. ಶಾಲೆಗೆ ಮಕ್ಕಳನ್ನು ಸೆಳೆಯುವ ವಿನೂತನ ಯೋಜನೆಯಾಗಿ ವಿದ್ಯಾರ್ಥಿ ವೇತನ ನೀಡಲಾರಂಭಿಸಿದರು. ಹೆಣ್ಣು ಮಕ್ಕಳು ಮತ್ತು ಕೆಳಜಾತಿಯ ಮಕ್ಕಳಿಗೆ ಜ್ಞಾನ ನೀಡುವ ಇವರ ಶ್ರಮ, ಸಾಂಪ್ರದಾಯಿಕ ಮನಃಸ್ಥಿತಿಯ ಜನರ ಕೆಂಗಣ್ಣಿಗೆ ಗುರಿಯಾಯಿತು. ಶಾಲೆಗೆ ತೆರಳುವಾಗ ಸಾವಿತ್ರಿಬಾಯಿಯ ಮೇಲೆ ಸೆಗಣಿ ಎಸೆದು ಅಪಹಾಸ್ಯ ಮಾಡುತ್ತಿದ್ದರು. ಇದರಿಂದ ಮನಃಸ್ಥೈರ್ಯ ಕಳೆದು ಕೊಳ್ಳದ ಸಾವಿತ್ರಿಬಾಯಿ, ಗಂಡನ ಸಲಹೆಯಂತೆ, ಶಾಲೆ ಯಲ್ಲಿ ಸೀರೆ ಬದಲಿಸಿಕೊಂಡು ಪಾಠ ಮಾಡುತ್ತಿದ್ದರು.

ಆದರೆ, ಸಾಮಾಜಿಕ ಪ್ರತಿರೋಧಕ್ಕೆ ಮಣಿದ ಜ್ಯೋತಿಬಾ ಮನೆಯವರು, ಈ ದಂಪತಿಯನ್ನು ಹೊರಗೆ ಹಾಕಿದ ನಂತರ ಇವರಿಗೆ ಆಶ್ರಯ ನೀಡಿ ಬೆಂಬಲಕ್ಕೆ ನಿಂತವರು, ಸ್ನೇಹಿತ ಉಸ್ಮಾನ್ ಶೇಖ್‌ ಕುಟುಂಬ. ಅವರ ತಂಗಿ ಫಾತಿಮಾ ಬೇಗಂ, ಸಾವಿತ್ರಿಬಾಯಿಯೊಂದಿಗೆ ಶಿಕ್ಷಕ ತರಬೇತಿ ಪಡೆದು, ‘ಭಾರತದ ಮೊದಲ ಮುಸ್ಲಿಂ ಶಿಕ್ಷಕಿ’ ಯೆಂಬ ಹೆಗ್ಗಳಿಕೆ ಪಡೆದರು. ಆನಂತರ, ಇಬ್ಬರೂ ಸೇರಿಕೊಂಡು ಉಸ್ಮಾನ್ ಶೇಖ್‌ ಮನೆಯಿಂದಲೇ ಶಾಲೆ ಆರಂಭಿಸಿದರು. ಹೀಗೆ ಪ್ರಾರಂಭವಾದ ಅವರ ಶಿಕ್ಷಣ ಸೇವೆ, ಮುಂದೆ 15 ಶಾಲೆಗಳನ್ನು ತೆರೆಯುವುದಕ್ಕೆ ಪ್ರೇರಣೆ ನೀಡಿತು. ಅವರ ಶಿಕ್ಷಣ ಸೇವೆಯನ್ನು ಗುರುತಿಸಿದ ಆಗಿನ ಬ್ರಿಟಿಷ್ ಸರ್ಕಾರವು ಸಾವಿತ್ರಿಬಾಯಿ ಅವರನ್ನು 1852ರಲ್ಲಿ ‘ಅತ್ಯುತ್ತಮ ಶಿಕ್ಷಕಿ’ಯೆಂದು ಗೌರವಿಸಿತು. ಆನಂತರ ಫುಲೆ ದಂಪತಿ, ಕೃಷಿ ಮತ್ತು ಕಾರ್ಮಿಕ ವರ್ಗದವರಿಗಾಗಿ ರಾತ್ರಿ ಶಾಲೆಯನ್ನು ಆರಂಭಿಸಿದರು. ವಿದ್ಯಾರ್ಜನೆಗೆ ಆರ್ಥಿಕ ಸಮಸ್ಯೆ ಅಡ್ಡಿಯಾಗ
ಬಾರದೆಂದು, ಮಹಾರಾಷ್ಟ್ರದಾದ್ಯಂತ 52 ಉಚಿತ ವಸತಿ ನಿಲಯಗಳನ್ನು ಸ್ಥಾಪಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಮಾಜಿಕ ಅನಿಷ್ಟ ಗಳನ್ನು ನಿರ್ಮೂಲನ ಮಾಡುವಲ್ಲಿಯೂ ಫುಲೆ ದಂಪತಿ ಬಹಳಷ್ಟು ಕೆಲಸ ಮಾಡಿದ್ದಾರೆ. ‘ಸತ್ಯಶೋಧಕ ಸಮಾಜ’ವೆಂಬ ಸಂಸ್ಥೆಯನ್ನು ಆರಂಭಿಸಿ, ಶಿಕ್ಷಣ ಮತ್ತು ಸಮಾನತೆಯ ಅರಿವು, ವರದಕ್ಷಿಣೆ ವಿರೋಧಿ ಸರಳ ವಿವಾಹ, ಅಸ್ಪೃಶ್ಯರಿಗೆ ಕುಡಿಯುವ ನೀರಿನ ವ್ಯವಸ್ಥೆಯಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರು. ಮಹಿಳಾ ಸೇವಾ ಮಂಡಳಿಗಳನ್ನು ಸ್ಥಾಪಿಸಿದ ಸಾವಿತ್ರಿಬಾಯಿ, ಬಾಲ್ಯವಿವಾಹ, ಹೆಣ್ಣುಭ್ರೂಣ ಹತ್ಯೆ ಹಾಗೂ ಸತಿ ಪದ್ಧತಿ ವಿರುದ್ಧ ಜಾಗೃತಿ ಅಭಿಯಾನ ಸಂಘಟಿಸಿದರು. ‘ಬಾಲ್ಯತಾ ಪ್ರತಿಬಂಧಕ್ ಗೃಹ್’ ಎಂಬ ಕೇಂದ್ರವನ್ನು ವಿಧವೆಯರು, ಅತ್ಯಾಚಾರಕ್ಕೆ ಒಳಗಾದವರು ಹಾಗೂ ಅವರ ಮಕ್ಕಳ ಸುರಕ್ಷತೆಗಾಗಿ ಸ್ಥಾಪಿಸಿದರು. ವಿಧವೆಯರ ಪುನರ್‌ವಿವಾಹಕ್ಕೆ ಬೆಂಬಲ ಕೊಟ್ಟರು.

ಸಾವಿತ್ರಿಬಾಯಿ ತಮ್ಮ ಸಭೆಗಳಲ್ಲಿ ಎಲ್ಲ ಜಾತಿಯ ಮಹಿಳೆಯರನ್ನು ಒಟ್ಟಿಗೆ ಕೂರಲು ಪ್ರೇರೇಪಿಸುತ್ತಿದ್ದರು. ಮಕ್ಕಳಿಲ್ಲದ ಜ್ಯೋತಿಬಾ ದಂಪತಿ, ಯಶವಂತ ರಾವ್‌ ಎಂಬ ಬಾಲಕನನ್ನು ದತ್ತು ಪಡೆದು, ಓದಿಸಿ ವೈದ್ಯ
ನನ್ನಾಗಿಸಿದರು.

1890ರಲ್ಲಿ ಜ್ಯೋತಿಬಾ ನಿಧನರಾದಾಗ, ವಿರೋಧದ ನಡುವೆ ಗಂಡನ ಚಿತೆಗೆ ತಾವೇ ಅಗ್ನಿಸ್ಪರ್ಶ ಮಾಡಿ ಹೊಸ ಮುನ್ನುಡಿ ಬರೆದರು. ಗಂಡನ ಮರಣಾನಂತರ, ಅವರ ಸಾಮಾಜಿಕ ಚಟುವಟಿಕೆಗಳ ಸಂಪೂರ್ಣ ಮೇಲ್ವಿಚಾರಣೆಯನ್ನು ಸಾವಿತ್ರಿಬಾಯಿ ಯಶಸ್ವಿಯಾಗಿ ಮುನ್ನಡೆಸಿದರು. ಕವಯಿತ್ರಿಯಾಗಿದ್ದ ಸಾವಿತ್ರಿಬಾಯಿ ಎರಡು ಕಾವ್ಯಸಂಗ್ರಹವನ್ನು ಪ್ರಕಟಿಸಿದ್ದಲ್ಲದೆ, ಜ್ಯೋತಿಬಾ ಅವರ ಭಾಷಣಗಳ ಸಂಗ್ರಹವನ್ನು ಸಂಪಾದಿಸಿ ಪ್ರಕಟಿಸಿದರು. ಮಹಾರಾಷ್ಟ್ರವು ಪ್ಲೇಗ್‌ ನಿಂದ ತತ್ತರಿಸಿದಾಗ, ಮಗನೊಂದಿಗೆ ಉಚಿತ ಆಸ್ಪತ್ರೆ ಪ್ರಾರಂಭಿಸಿ, ರೋಗಿಗಳ ಆರೈಕೆಯಲ್ಲಿ ತೊಡಗಿ ಕೊಂಡರು.

ಪ್ರಸಕ್ತ, ಭಾರತೀಯ ಮಹಿಳೆ ನಾನಾ ಕಾರಣ ಗಳಿಂದ ಸಂಪೂರ್ಣ ಸಮಾನತೆ ಸಾಧಿಸಿಲ್ಲದಿರ
ಬಹುದು. ಆದರೆ, ಇದಕ್ಕೆ ಗಟ್ಟಿಯಾದ ತಳಹದಿ ಹಾಕಿ, ರೂಪುರೇಷೆಗಳನ್ನು ಸಿದ್ಧಪಡಿಸಿ, ದೇಶದ ಮಹಿಳೆ ಯರು ಇಷ್ಟು ದೂರ ಮುನ್ನಡೆಯಲು ಕಾಲುಗಳಿಗೆ ಶಕ್ತಿ ತುಂಬಿದ ಸಾವಿತ್ರಿಬಾಯಿ ಕೊಡುಗೆ ಸ್ಮರಣೀಯ. ಈ ದಿಸೆಯಲ್ಲಿ, ಅವರ ಜನ್ಮದಿನವನ್ನು ‘ರಾಷ್ಟ್ರೀಯ ಮಹಿಳಾ ದಿನ’ವೆಂದು ಘೋಷಿಸಿ, ಅವರಿಗೆ ಕೃತಜ್ಞತೆ ಸಲ್ಲಿಸುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT