ಕಾವೇರಿ ಚರ್ಚೆಗೆ ವಿಶೇಷ ಅಧಿವೇಶನ ರಾಜ್ಯದ ರೈತರ ಹಿತ ರಕ್ಷಣೆಗೆ ಆದ್ಯತೆ ಬೆಂಗಳೂರು, ಡಿ. 22– ತಮಿಳುನಾಡಿಗೆ 11 ಟಿಎಂಸಿ ಅಡಿ ನೀರನ್ನು ಬಿಡಲು ಕಾವೇರಿ ನ್ಯಾಯಮಂಡಳಿ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ‘ರಾಜ್ಯದ ಜಲಾಶಯಗಳಲ್ಲೇ ನೀರಿಲ್ಲದ ಈಗಿನ ಪರಿಸ್ಥಿತಿಯಲ್ಲಿ ರಾಜ್ಯದ ಹಿತ ಬಲಿ ಕೊಡಲು ಸಾಧ್ಯವಿಲ್ಲ’ ಎಂದು ಸರ್ವ ಪಕ್ಷಗಳ ಮುಖಂಡರ ಸಭೆ ಒಮ್ಮತದ ನಿರ್ಣಯವನ್ನು ಇಂದು ಇಲ್ಲಿ ಕೈಗೊಂಡಿತು.
ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಸೇರಿದ್ದ ಸರ್ವ ಪಕ್ಷಗಳ ಮುಖಂಡರ ಸಭೆ ಈ ನಿರ್ಣಯ ಕೈಗೊಳ್ಳುವ ಮುನ್ನ, ಸಚಿವ ಸಂಪುಟ ಸಭೆ ಸೇರಿ ಈ ವಿಷಯದ ಬಗ್ಗೆ ಚರ್ಚಿಸಿತು.
ಸರ್ವ ಪಕ್ಷಗಳ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ, ಎಂ.ವೀರಪ್ಪ ಮೊಯಿಲಿ, ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಚ್.ಕೆ.ಪಾಟೀಲ್, ಅವರೊಂದಿಗೆ ಬಿಜೆಪಿ ಮುಖಂಡ ಎಚ್.ಎನ್.ನಂಜೇಗೌಡ, ರಾಮಚಂದ್ರ ಗೌಡ ಇದ್ದರು.
ಅನುಮಾನಾಸ್ಪದ ವಿಮಾನ ವಶ ನವದೆಹಲಿ, ಡಿ. 22 (ಪಿಟಿಐ)– ಪಶ್ಚಿಮ ಬಂಗಾಳದ ಪುರ್ಲಿಯಾ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಇಳಿಸಿದ ವಿಮಾನವೆಂದು ನಂಬಲಾದ ವಿದೇಶಿ ವಿಮಾನವೊಂದನ್ನು ಭಾರತದ ವಾಯುಪಡೆಯ ಎರಡು ವಿಮಾನಗಳು ಇಂದು ಬೆಳಗಿನ ಜಾವ ತಡೆದು ಮುಂಬೈಯಲ್ಲಿ ಬಲವಂತವಾಗಿ ಇಳಿಸಿವೆ.
ಇದರಿಂದಾಗಿ ವಿಮಾನದಿಂದ ಶಸ್ತ್ರಾಸ್ತ್ರ ಎಸೆದ ನಿಗೂಢ ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ದೊರೆಯಬಹುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.