ಬೇಗ ಕಸರತ್ತು ಮುಗಿಸಿ; ಸೋನಿಯಾಗೆ ತಾಕೀತು
ನವದೆಹಲಿ, ಏ. 23– ಪರ್ಯಾಯ ಸರ್ಕಾರ ರಚನೆ ಸಾಧ್ಯತೆಯ ಕಸರತ್ತನ್ನು ‘ಆದಷ್ಟು ಕೂಡಲೇ ಮುಗಿಸಲು’ ಇತರ ಪ್ರತಿಪಕ್ಷಗಳ ಜತೆ ಸಮಾಲೋಚನೆ ನಡೆಸಲು ರಾಷ್ಟ್ರಪತಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಇಂದು ರಾತ್ರಿ ಮತ್ತಷ್ಟು ಕಾಲಾವಕಾಶ ನೀಡಿದ್ದಾರೆ. ಆದರೂ ಕಾಂಗ್ರೆಸ್ಸೇತರ ಪ್ರತಿಪಕ್ಷಗಳಲ್ಲಿ ಇನ್ನೂ ಅಸ್ಪಷ್ಟ ನಿಲುವು ಮುಂದುವರಿದಿರುವುದರಿಂದ ನೂತನ ಸರ್ಕಾರ ರಚನೆಯ ಪ್ರಶ್ನೆ ಡೋಲಾಯಮಾನವಾಗಿಯೇ ಇದೆ.
ಲೋಕಸಭೆಯಲ್ಲಿ ಎರಡನೇ ಪ್ರಮುಖ ಪಕ್ಷವಾದ ಕಾಂಗ್ರೆಸ್ ನೂತನ ಸರ್ಕಾರ ರಚಿಸುವ ಸಾಧ್ಯತೆಗಳನ್ನು ಪರಿಶೀಲಿಸಲು ಸೋನಿಯಾ ಗಾಂಧಿ ಅವರಿಗೆ ಎರಡು ದಿನ ಕಾಲಾವಕಾಶ ನೀಡಿದ್ದರು. ಈ ಅವಧಿ ಇಂದು ಮುಗಿದು, ಇಂದಿನವರೆವಿಗೆ 233 ಸದಸ್ಯರ ಬೆಂಬಲವನ್ನು ಮಾತ್ರ ಗಳಿಸಿದ್ದ ಅವರಿಗೆ ಪರ್ಯಾಯ ಸರ್ಕಾರ ರಚನೆಗೆ ಮತ್ತಷ್ಟು ಕಾಲಾವಕಾಶ ನೀಡಲಾಗಿದೆ.
***
ಚುನಾವಣೆ ತಪ್ಪಿಸಲು ಅಟಲ್ಗೆ ಮೈತ್ರಿಕೂಟ ಅಧಿಕಾರ
ನವದೆಹಲಿ, ಏ. 23– ಕಾಂಗ್ರೆಸ್ ಬಣವು ಪರ್ಯಾಯ ಸರ್ಕಾರ ರಚನೆ ಮಾಡುವಲ್ಲಿ ವಿಫಲಗೊಂಡರೆ, ಮತ್ತೆ ಸರ್ಕಾರ ರಚನೆಗೆ ಮುಂದಾಗಲು ವಾಜಪೇಯಿ ಅವರನ್ನು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಇಂದು ತಮ್ಮ ಸಂಸದೀಯ ನಾಯಕನನ್ನಾಗಿ ಪುನರಾಯ್ಕೆ ಮಾಡಿಕೊಂಡಿವೆ.
ವಾಜಪೇಯಿ ಅವರು ಸಂಸದೀಯ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿ, ಹೊಸ ನಾಯಕನನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡಿದ ಸಲಹೆಯನ್ನು ಸಭೆ ತಿರಸ್ಕರಿಸಿತು. ನಂತರ ಸಭೆಯು ವಾಜಪೇಯಿ ಅವರ ನಾಯಕತ್ವದಲ್ಲಿ ಮತ್ತೆ ಪೂರ್ಣ ವಿಶ್ವಾಸ ವ್ಯಕ್ತಪಡಿಸಿ ಅವರನ್ನೇ ಸಂಸದೀಯ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿಕೊಂಡಿದ್ದು ಇಂದಿನ ವಿಶೇಷ ಬೆಳವಣಿಗೆ.