ನವದೆಹಲಿ, ಜೂನ್ 16– ಜನತಾ ದಳದಿಂದ ಉಚ್ಚಾಟಿತರಾಗಿರುವ ರಾಜ್ಯಸಭೆ ಸದಸ್ಯ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಕರ್ನಾಟಕ ಕಾಂಗ್ರೆಸ್ ಪಕ್ಷದ ನಾಯಕ ಎಸ್. ಬಂಗಾರಪ್ಪ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೆಳೆದುಕೊಳ್ಳುವ ಒಲವನ್ನು ಅನೇಕ ಹಿರಿಯ ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದಾರೆ.
ನಿನ್ನೆ ಮುಕ್ತಾಯಗೊಂಡ ಮೂರು ದಿನಗಳ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ, ಈಗ ದಳದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಲಾಭ ಪಡೆಯುವ ಬಗೆಗೆ ಶರದ್ ಪವಾರ್, ಕೆ. ಕರುಣಾಕರನ್, ರಾಜೇಶ್ ಪೈಲಟ್ ಮುಂತಾದವರು ಈ ಅಭಿಪ್ರಾಯ ವ್ಯಕ್ತ ಪಡಿಸಿದರೆಂದು ಪಕ್ಷದ ವಿಶ್ವಸನೀಯ ಮೂಲಗಳು ಹೇಳಿವೆ.
ಕವಿತೆಗಿಂತ ಸುಂದರ ದೊಡ್ಡವರ ಬದುಕು– ಕೆಎಸ್ನ
ಬೆಂಗಳೂರು, ಜೂನ್ 16– ‘ಮಾಸ್ತಿ ನನಗೆ ಕೆಲಸ ಕೊಡಿಸಿದ್ರು, ಬದುಕು ನಿಲ್ಲಿಸಿದ್ರು, ಅಂತಿಮವಾಗಿ ಪ್ರಶಸ್ತಿನೂ ಕೊಡಿಸಿದ್ರು...’
ಎಂಬತ್ತೊಂದರ ವಯಸ್ಸಿನಲ್ಲಿ ಅನಾರೋಗ್ಯದ ಕಾರಣದಿಂದ ನರಳುತ್ತಾ, ಉಸಿರಾಡಲು ಕಷ್ಟಪಡುತ್ತ, ಏದುಬ್ಬಸ ಪಡುತ್ತಾ, ಇಂದಿನ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಕೆ.ಎಸ್. ನರಸಿಂಹಸ್ವಾಮಿ ಅವರು ಮಾಸ್ತಿಯವರನ್ನು ಕೃತಜ್ಞತೆಯಿಂದ ನೆನಪಿಸಿಕೊಂಡ ರೀತಿ ಇದು.
ಡಾ. ಮಾಸ್ತಿ ಪ್ರಶಸ್ತಿ ಸ್ವೀಕರಿಸಿ, ತಮ್ಮದೇ ಆದ ‘ಪದ್ಯ’ದ ಶೈಲಿಯಲ್ಲಿ ಮಾತನಾಡಿದ ಕೆಎಸ್ನ, ‘1936ರಲ್ಲಿ ನಾನು ಮದುವೆಯಾದೆ. ಆ ಸಂದರ್ಭದಲ್ಲಿ ಮಾಸ್ತಿ ಅವರು ಮೈಸೂರು ಪ್ರೆಸಿಡೆನ್ಸಿಯ ಅಧಿಕಾರಿಯಾಗಿದ್ದಾಗ ನಗರಸಭೆಯಲ್ಲಿ ಗುಮಾಸ್ತನ ಕೆಲಸ ಕೇಳಲು ಹೋದೆ. ಅವರು ನನ್ನ ಪದ್ಯ ಓದಿರುವುದಾಗಿ ಹೇಳಿದರು. ನನ್ನ ಇತ್ತೀಚಿನ ಪದ್ಯ ಓದಿದ್ದೀರಾ ಎಂದು ನಾನು ಕೇಳಿದೆ. ‘ಇದು ಕಚೇರಿ ನೆನಪಿರಲಿ’ ಎಂದು ಅವರು ಗದರಿದರು.
‘ಆದರೆ, ನನಗೆ ಕೆಲಸ ಸಿಕ್ಕಿತು. ಮತ್ತೆ ನಗರಸಭೆಯಿಂದ ನನ್ನನ್ನು ಕಂದಾಯ ಇಲಾಖೆಗೆ ವರ್ಗಾಯಿಸುವ ಸಂದರ್ಭದಲ್ಲಿ ತೊಂದರೆಗೆ ಸಿಲುಕಿದ್ದ ನನ್ನನ್ನು ಆಗ ಅಬ್ಕಾರಿ ಆಯುಕ್ತರಾಗಿದ್ದ ಮಾಸ್ತಿ ಅವರು ಕಂದಾಯ ಆಯುಕ್ತರಿಗೆ ಫೋನು ಮಾಡಿ ಉಳಿಸಿದರು’ ಎಂದು ಕೆಎಸ್ನ ನೆನಪಿನಂಗಳಕ್ಕೆ ಇಳಿದರು.