ರೇಷ್ಮೆ ರೈತರಿಗೆ ಲಾಠಿ- ರಾಮಕೃಷ್ಣ ಹೆಗಡೆ ಮನೆಗೆ ದಾಳಿ
ಬೆಂಗಳೂರು, ಜ. 11 – ವಿದೇಶಗಳಿಂದ ಕಚ್ಚಾ ರೇಷ್ಮೆ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿ ಮಾಜಿ ಸಚಿವ ವೈ.ಕೆ. ರಾಮಯ್ಯ ಅವರ ನೇತೃತ್ವದಲ್ಲಿ ಇಂದು ಇಲ್ಲಿ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಪ್ರಯೋಗಿಸಿದಾಗ ಹಲವಾರು ಮಂದಿ ಗಾಯಗೊಂಡರು.
ರೇಷ್ಮೆ ಬೆಳೆಗಾರರ ಒಂದು ಗುಂಪು 4–5 ವಾಹನಗಳಲ್ಲಿ ಸಿ.ವಿ.ರಾಮನ್ ರಸ್ತೆಯಲ್ಲಿ ಕೇಂದ್ರ ಸಚಿವ ರಾಮಕೃಷ್ಣ ಹೆಗಡೆ ಅವರ ಮನೆಗೆ ಕಲ್ಲು ತೂರಿ ದಾಂದಲೆ ನಡೆಸಿತು. ಈ ಗಲಾಟೆಯಲ್ಲಿ ಹೆಗಡೆ ಅವರ ಮನೆಯ ಮೊದಲ ಮಹಡಿ ಮತ್ತು ನೆಲಮಹಡಿಯ ಗಾಜುಗಳು ಪುಡಿಪುಡಿಯಾಗಿದ್ದು, ಆವರಣದಲ್ಲಿ ನಿಂತಿದ್ದ ಒಂದು ಕಾರನ್ನು ಜಖಂಗೊಳಿಸಲಾಗಿದೆ.
ಸುರತ್ಕಲ್ ಗಲಭೆ ತನಿಖೆಗೆ ನ್ಯಾಯಾಂಗ ಆಯೋಗ
ಮಂಗಳೂರು, ಜ. 11 – ‘ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಮತ್ತು ಇತರ ಕಡೆಗಳಲ್ಲಿ ಇತ್ತೀಚೆಗೆ ನಡೆದ ಗಲಭೆಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಹೇಳಿದರು.
ರಾಜ್ಯದ ನ್ಯಾಯಾಧೀಶರೊಂದಿಗೆ ಸಮಾಲೋಚಿಸಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯೊಬ್ಬರ ಏಕ ಸದಸ್ಯ ಆಯೋಗವೊಂದನ್ನು ಸದ್ಯದಲ್ಲೇ ಇದಕ್ಕಾಗಿ ನೇಮಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯ ಗಲಭೆಗಳಿಗೆ ಕಾರಣರಾದ ದುಷ್ಕರ್ಮಿಗಳನ್ನು ಪತ್ತೆ ಮಾಡಿಕೊಡಲು ಆಯೋಗವನ್ನು ಕೇಳಿಕೊಳ್ಳಲಾಗುವುದು ಎಂದು ಅವರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.