ಮಾನವೀಯತೆ ಮೆರೆದ ಸರ್ಕಾರಿ ವೈದ್ಯರು
ಚಿಕ್ಕಮಗಳೂರು, ಡಿ. 26 – ಮುಷ್ಕರದ ಮಧ್ಯೆಯೂ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಕರ್ತವ್ಯಪ್ರಜ್ಞೆ ತೋರಿ ಮೂರು ಜೀವಗಳನ್ನು ಉಳಿಸಿ ಮಾನವೀಯತೆ ಮೆರೆದ ಘಟನೆ ಇಂದು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನಡೆಯಿತು.
ಆಲ್ದೂರಿನಲ್ಲಿ ವ್ಯಾನೊಂದು ಅಪಘಾತಕ್ಕೀಡಾಗಿ ಒಬ್ಬ ಸ್ಥಳದಲ್ಲೇ ಸತ್ತು ಇತರ 25ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಪೈಕಿ ನಾಲ್ಕೈದು ಮಂದಿಗೆ ಗಂಭೀರ ಗಾಯಗಳಾದವು. ಆಲ್ದೂರು ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಖಾಸಗಿ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಹಾಗೂ ಸಿಬ್ಬಂದಿ ಮುಷ್ಕರದ ಮಧ್ಯೆಯೂ ಸಕಾಲದಲ್ಲಿ ಚಿಕಿತ್ಸೆ ನೀಡಿ ಮೂವರ ಜೀವ ಉಳಿಸಿದರು.
ಉದ್ಯಮಿಗಳ ಕೈಗೆ ಆರ್ಥಿಕ ನೀತಿ: ದೇವೇಗೌಡ ಗೇಲಿ
ಬೆಂಗಳೂರು, ಡಿ. 26 – ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಆರ್ಥಿಕ ನೀತಿಗಳನ್ನು ಇಂದು ಇಲ್ಲಿ ಕಟುವಾಗಿ ಟೀಕಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ‘ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಹೊಸ ನೀತಿಗಳನ್ನು ರೂಪಿಸುವಾಗ ಸರ್ಕಾರ
ಅರ್ಥಶಾಸ್ತ್ರಜ್ಞರ ಸಲಹೆ ಪಡೆಯುವುದರ ಬದಲು ಕೈಗಾರಿಕೋದ್ಯಮಿಗಳ ಸಲಹೆ ಪಡೆಯುತ್ತಿದೆ’ ಎಂದು ಆರೋಪಿಸಿದರು.
‘ನಾನು ಪ್ರಧಾನಿಯಾಗಿದ್ದಾಗ ಜಾರಿಗೆ ತಂದಿದ್ದ ಬಡವರ ಪರವಾದ ಹಲವಾರು ಕಾರ್ಯಕ್ರಮಗಳನ್ನು ಈಗಿನ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ರದ್ದುಗೊಳಿಸಿದೆ; ಇದು ದೇಶದಲ್ಲಿ ಹಣದುಬ್ಬರಕ್ಕೆ ಕಾರಣವಾಗಿದೆ; ಅಲ್ಲದೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ’ ಎಂದು ಅವರು ಟೀಕಿಸಿದರು.