ಹಕ್ಕುಸ್ವಾಮ್ಯ: ತಿದ್ದುಪಡಿಗೆ ನಿರ್ಧಾರ
ನವದೆಹಲಿ, ನ. 23– ಬಹುರಾಷ್ಟ್ರೀಯ ಕಂಪನಿಗಳಿಗೆ ಪ್ರತ್ಯೇಕ ಮಾರುಕಟ್ಟೆ ಹಕ್ಕಿಗೆ ಅವಕಾಶವಾಗುವಂತೆ ಭಾರತೀಯ ಹಕ್ಕು ಸ್ವಾಮ್ಯ (ಪೇಟೆಂಟ್) ಕಾಯ್ದೆಗೆ ತಿದ್ದುಪಡಿ ಸೂಚಿಸುವ ಮಹತ್ವದ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿತು.
ವಿಮಾ ಕ್ಷೇತ್ರದಲ್ಲಿ ಖಾಸಗಿಯವರ ಪ್ರವೇಶಕ್ಕೆ ಅನುಕೂಲವಾಗುವಂತೆ ವಿಮಾ ಕಾಯ್ದೆಗೆ ತಿದ್ದುಪಡಿ ಸೂಚಿಸುವ ಪ್ರಸ್ತಾವಕ್ಕೂ ಸಂಪುಟ ಅನುಮೋದನೆ ನೀಡಿತು.
ಬಿರುಗಾಳಿ ಎಬ್ಬಿಸಿದ ಕೃಪಾಂಕ ವಿವಾದ
ಬೆಂಗಳೂರು, ನ. 23– ಕೃಪಾಂಕದ ವಿವಾದ ಕರ್ನಾಟಕದಲ್ಲಿ, ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿ ಸಮುದಾಯದಲ್ಲಿ ದೊಡ್ಡ ಬಿರು ಗಾಳಿಯನ್ನೇ ಏಳಿಸಿದೆ. ಹಲವು ಪಟ್ಟಣಗಳಲ್ಲಿ ವಿದ್ಯಾರ್ಥಿಗಳು ಈ ಕೃಪಾಂಕ ರದ್ದು ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಶಾಲೆ ಕಾಲೇಜು ಗಳನ್ನು ಬಹಿಷ್ಕರಿಸಿದ್ದಾರೆ. ಇದು ದೊಡ್ಡದಾಗಿ ಬೆಳೆಯುವ ಸೂಚನೆ ಈಗಾಗಲೇ ಕಾಣಿಸಿದೆ.
ಗ್ರಾಮಾಂತರ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಶೇಕಡ 10ರಷ್ಟು ಕೃಪಾಂಕ ನೀಡುವುದು ಉಚಿತ ಎಂದು ಭಾವಿಸಿ ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಈ ಕ್ರಮವು ರಾಜ್ಯ ಹೈಕೋರ್ಟ್ ತೀರ್ಪಿನಿಂದಾಗಿ ಈಗ ರದ್ದಾಗಿದೆ.