ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ ನಿಗಮ: ಸಂಪುಟ ಒಪ್ಪಿಗೆ
ಬೆಂಗಳೂರು, ಮೇ 7– ರಾಜ್ಯದಲ್ಲಿರುವ ಜಿಲ್ಲಾ ಮುಖ್ಯ ರಸ್ತೆಗಳು ಮತ್ತು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮಹಾರಾಷ್ಟ್ರದ ಮಾದರಿಯಲ್ಲಿ ಹತ್ತು ಕೋಟಿ ರೂಪಾಯಿ ಮೂಲ ಬಂಡವಾಳದೊಂದಿಗೆ ‘ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ’ ಸ್ಥಾಪಿಸಲು ಇಂದು ಸೇರಿದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತು.
ಲಾಟರಿ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ
ನವದೆಹಲಿ, ಮೇ 7 (ಯುಎನ್ಐ)– ರಾಜ್ಯಗಳು ತಮ್ಮ ಪ್ರದೇಶದ ವ್ಯಾಪ್ತಿಯಲ್ಲಿ ಇತರ ರಾಜ್ಯಗಳ ಲಾಟರಿಗಳನ್ನು ನಿಷೇಧಿಸುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಕೇಂದ್ರ ಜಾರಿಗೆ ತಂದಿರುವ ಲಾಟರಿ ನಿಷೇಧ ಕಾಯ್ದೆಯ 5ನೇ ಕಲಂ ಪ್ರಕಾರ ರಾಜ್ಯ ಸರ್ಕಾರಗಳಿಗೆ ಈ ಅಧಿಕಾರವಿದೆ ಎಂದು ತನ್ನ ಐತಿಹಾಸಿಕ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
‘ಕಾವೇರಿ ಗಲಭೆ ನಿರಾಶ್ರಿತರ ಪ್ರಾಧಿಕಾರ’ ರಚನೆಗೆ ಆದೇಶ
ಕರೂರು, ಮೇ 7 (ಯುಎನ್ಐ)– ‘ಕಾವೇರಿ ಗಲಭೆ ನಿರಾಶ್ರಿತರ ಪ್ರಾಧಿಕಾರ’ವನ್ನು ಮೇ 15ರೊಳಗೆ ರಚಿಸಬೇಕೆಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಪ್ರಾಧಿಕಾರವನ್ನು ರಚಿಸಿ 1991ರ ಡಿಸೆಂಬರ್ ಮತ್ತು 1992ರ ಜನವರಿ ತಿಂಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ನೀರಿನ ಹಂಚಿಕೆ ಸಂಬಂಧ ಉಂಟಾದ ಗಲಭೆಯಲ್ಲಿ
ತೊಂದರೆಗೊಳಗಾದವರಿಂದ ಅರ್ಜಿಯನ್ನು ಆಹ್ವಾನಿಸಬೇಕೆಂದು ಕೋರ್ಟ್ ಆದೇಶ ಕೊಟ್ಟಿದೆ.