ನವದೆಹಲಿ, ನ. 22 (ಯುಎನ್ಐ)– ಬೆಂಗಳೂರಿನಲ್ಲಿ ನಾಳೆ ನಡೆಯಲಿರುವ ವಿಶ್ವ ಸುಂದರಿ ಸ್ಪರ್ಧೆಯ ಅಂತಿಮ ಪ್ರದರ್ಶನದ ಅವಧಿಯಲ್ಲಿ ಅಶ್ಲೀಲತೆ ಹಾಗೂ ನಗ್ನತೆಗೆ ಸಂಬಂಧಿಸಿದಂತೆ ಕೆಲವೊಂದು ಮಾರ್ಗಸೂಚಿಗಳನ್ನು ವಿಧಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ.
ಕರ್ನಾಟಕ ಹೈಕೋರ್ಟ್ ತೀರ್ಪಿನಿಂದಾಗಿ, ಸ್ಪರ್ಧೆ ಸಂಘಟಿಸಿರುವ ಸೂಪರ್ ಸ್ಟಾರ್ ‘ಅಮಿತಾಭ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್’ ಸಂಸ್ಥೆಯ ಪಾಳೆಯದಲ್ಲಿ ಮೂಡಿದ್ದ ಆತಂಕ ಹಾಗೂ ಅನಿಶ್ಚಿತತೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ಕೊನೆಗೊಂಡಿದೆ.
ಹೈಕೋರ್ಟ್ನ ತೀರ್ಪು ಪ್ರಾಯೋಗಿಕವಲ್ಲ ಎಂಬುದು ತಮಗೆ ಮನವರಿಕೆಯಾಗಿದೆ ಎಂದು ನ್ಯಾಯಪೀಠ ಹೇಳಿದೆ. ಪ್ರೇಕ್ಷಕರಿಗೆ ಮದ್ಯ ವಿತರಣೆ ಮಾಡುವುದಿಲ್ಲ ಎಂದು ಈ ಮುಂಚೆ ಎಬಿಸಿಎಲ್ ಸಲ್ಲಿಸಿದ ಪ್ರಮಾಣ ಪತ್ರವನ್ನು ಕೋರ್ಟ್ ದಾಖಲಿಸಿಕೊಂಡಿತು.
ಸೌಂದರ್ಯ ಸ್ಪರ್ಧೆಯ ಸ್ಪರ್ಧಿಗಳು ಅಶ್ಲೀಲತೆ ಅಥವಾ ನಗ್ನತೆಯಲ್ಲಿ ತೊಡಗುವುದು. ಸ್ಪರ್ಧಿಗಳು ಅಥವಾ ಪ್ರೇಕ್ಷಕರ ಯಾವುದೋ ಒಂದು ವರ್ಗಕ್ಕೆ ಮದ್ಯ ವಿತರಣೆ. ಒಂದು ವೇಳೆ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆಯಾದರೆ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಳ್ಳುವುದು ಸೇರಿದಂತೆ ಸೌಂದರ್ಯ ಸ್ಪರ್ಧೆಗೆ ಕೆಲವೊಂದು ಮಾರ್ಗಸೂಚಿಗಳನ್ನು ನೀಡಿ ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠ ಕಳೆದ 19ರಂದು ಆದೇಶ ಹೊರಡಿಸಿತ್ತು.