ಕೆಪಿಸಿಸಿ ಗಾತ್ರಕ್ಕೆ ಸೋನಿಯಾ ಕತ್ತರಿ ಸಂಭವ
ನವದೆಹಲಿ, ಸೆ. 11– ‘ಜಂಬೋ ಜೆಟ್ ಕೆಪಿಸಿಸಿ ಪದಾಧಿಕಾರಿಗಳ ಮತ್ತು ಕಾರ್ಯನಿರ್ವಾಹಕ ಸಮಿತಿಯ ಗಾತ್ರದ ಬಗೆಗೆ ಅಸಮಾಧಾನ ಮತ್ತು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಮಿತಿಯ ಗಾತ್ರವನ್ನು ಕಡಿಮೆ ಮಾಡುವ ಇಂಗಿತ ನೀಡಿದ್ದಾರೆ’.
ಕಳೆದ ವಾರ ರಚನೆಗೊಂಡ ಕೆಪಿಸಿಸಿ ಪಟ್ಟಿಯ ಬಗೆಗೆ ಸೋನಿಯಾ ಗಾಂಧಿ ಅವರಿಗೆ ಈಗಾಗಲೇ ದೂರುಗಳು ಬರುತ್ತಿದ್ದು, ನಿನ್ನೆ ವಿಧಾನ ಪರಿಷತ್ತಿನ ಹಿರಿಯ ಕಾಂಗ್ರೆಸ್ ಸದಸ್ಯ ಟಿ.ಎನ್.ನರಸಿಂಹಮೂರ್ತಿ ಖುದ್ದು ಭೇಟಿಯಾಗಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಇಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಮತ್ತು ವಿಧಾನ ಪರಿಷತ್ತಿನ ಮತ್ತೊಬ್ಬ ಸದಸ್ಯ ಕೆ.ಮಲ್ಲಣ್ಣ, ಸೋನಿಯಾ ಅವರನ್ನು ಭೇಟಿಯಾಗಿದ್ದಾರೆ.
**
ರಾಜ್ಯ ದಳ ಪುನರ್ರಚನೆ 105 ಮಂದಿಗೆ ಸ್ಥಾನ
ಬೆಂಗಳೂರು, ಸೆ. 11– ರಾಜ್ಯ ಜನತಾ ದಳದ ಕಾರ್ಯಕಾರಿ ಸಮಿತಿಯನ್ನು ಪುನರ್ರಚಿಸಲಾಗಿದ್ದು 47 ಮಂದಿ ಪದಾಧಿಕಾರಿಗಳೂ ಸೇರಿದಂತೆ ಒಟ್ಟು 105 ಮಂದಿ ಸದಸ್ಯರು ಪುನರ್ರಚಿತ ಸಮಿತಿಯಲ್ಲಿದ್ದಾರೆ.
ಮಾಜಿ ಸಚಿವ ಶಿವಾನಂದ ಕೌಜಲಗಿ ಅವರನ್ನು ಹಿರಿಯ ಉಪಾಧ್ಯಕ್ಷರನ್ನಾಗಿ, ಶಾಸಕ ಕೆ.ಎಚ್.ಶ್ರೀನಿವಾಸ್ ಅವರನ್ನು ಪಕ್ಷದ ವಕ್ತಾರರನ್ನಾಗಿ, ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಸೋದರ ಎಸ್.ಎಚ್.ಪಟೇಲ್ ಅವರನ್ನು ನೀತಿ ಮತ್ತು ಕಾರ್ಯಕ್ರಮ ಸಮಿತಿಯ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸದೀಯ ಮಂಡಲಿಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.