ಬೆಂಗಳೂರು, ಸೆ. 18– ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಮರು ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಇಂದು ನಾಮಪತ್ರ ಸಲ್ಲಿಸಿದರು. ಗೌಡರು ಸ್ಪರ್ಧಾ ಕಣದಲ್ಲಿರುವ ಏಕೈಕ ಅಭ್ಯರ್ಥಿಯಾಗಿದ್ದು ಅವರ ಅವಿರೋಧ ಆಯ್ಕೆ ಖಚಿತವಾಗಿದೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಅಂತಿಮ ಗಳಿಗೆಗೆ ಒಂದು ಗಂಟೆ ಮುಂಚಿತವಾಗಿ ನಾಲ್ಕು ಸೆಟ್ಗಳಲ್ಲಿ ಅವರು ನಾಮಪತ್ರ ಸಲ್ಲಿಸಿದರು. ನಾಮ ಹಿಂತೆಗೆದುಕೊಳ್ಳುವ ಕೊನೆಯ ದಿನವಾದ ಶನಿವಾರ (ಸೆ.21) ಅಧಿಕೃತವಾಗಿ ಆಯ್ಕೆ ಘೋಷಣೆಯಾಗಲಿದೆ.
ದೇವೇಗೌಡರ ವಿರುದ್ಧ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವುದಾಗಿ ರಾಷ್ಟ್ರೀಯ ನವ ನಿರ್ಮಾಣ ವೇದಿಕೆಯ ಅಧ್ಯಕ್ಷ ರಾಮಕೃಷ್ಣ ಹೆಗಡೆ ಅವರ ಹೇಳಿಕೆಯಿಂದ ಉಂಟಾಗಿದ್ದ ಗೊಂದಲ, ಅನಿಶ್ಚತತೆಗೆ ತೆರೆಬಿದ್ದು ಗೌಡರ ಆಯ್ಕೆ ಸುಗಮವಾದಂತಾಗಿದೆ.