ನವದೆಹಲಿ, ಏ. 14– ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರು ಇಂದು ಮೈಸೂರು ವಿಧಾನ ಸಭೆಯನ್ನು ವಿಸರ್ಜಿಸಿದ್ದಾರೆ.
ರಾಜ್ಯಪಾಲ ಶ್ರೀ ಧರ್ಮವೀರ ಅವರ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ಈ ನಿರ್ಧಾರ ಕೈಗೊಂಡರು.
ಯಾವ ಪಕ್ಷವೂ ಒಂಟಿಯಾಗಿ ಅಥವಾ ಇತರ ಪಕ್ಷಗಳೊಡನೆ ಸೇರಿಕೊಂಡು ಮೈಸೂರು ರಾಜ್ಯದಲ್ಲಿ ಸುಭದ್ರ ಸರ್ಕಾರ ರಚಿಸುವ ಭರವಸೆ ನೀಡುವ ಸ್ಥಿತಿಯಲ್ಲಿ ಇಲ್ಲವೆಂದು ಶ್ರೀ ಧರ್ಮವೀರ ಅವರು ತಮ್ಮ ಇತ್ತೀಚಿನ ವರದಿಯಲ್ಲಿ ತಿಳಿಸಿದ್ದರೆಂದು ಗೊತ್ತಾಗಿದೆ.
ಕಳೆದ ತಿಂಗಳು ಮೈಸೂರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬಂದಾಗಿನಿಂದಸ್ಥಗಿತಗೊಳಿಸಲಾಗಿದ್ದ ವಿಧಾನಸಭೆಯನ್ನು ವಿಸರ್ಜಿಸುವಂತೆ ಅವರು ಸಲಹೆ ಮಾಡಿದ್ದರು.
ಮುಕ್ತಿ ಫೌಜ್ ಸಮರ ಸಾಮರ್ಥ್ಯದ ಬಗ್ಗೆ ಪಶ್ಚಿಮ ರಾಷ್ಟ್ರಗಳ ಮೆಚ್ಚುಗೆ
ನ್ಯೂಯಾರ್ಕ್, ಏ. 14– ಎರಡು ವಾರಗಳಿಗೂ ಹೆಚ್ಚು ದಿನಗಳಿಂದ ಪಶ್ಚಿಮ ಪಾಕಿಸ್ತಾನದ ವ್ಯವಸ್ಥಿತ ಸೇನೆಯ ವಿರುದ್ಧ ಹೋರಾಟ ನಡೆಸಿರುವ ಬಾಂಗ್ಲಾ ದೇಶದ ಸ್ವಾತಂತ್ರ್ಯ ಹೋರಾಟಗಾರರ ಸಮರ ಸಾಮರ್ಥ್ಯವು ಪಶ್ಚಿಮ ರಾಷ್ಟ್ರಗಳ ಮೆಚ್ಚುಗೆ ಗಳಿಸಿದೆ.
ಪಶ್ಚಿಮ ಪಾಕಿಸ್ತಾನದ ವೃತ್ತಿನಿರತ ಸೈನಿಕರ ವ್ಯವಸ್ಥಿತ ದಮನ ಕಾರ್ಯಗಳ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ನಡೆಸಿರುವ ಕೆಚ್ಚೆದೆಯ ಸಮರ ತುಂಬ ಗಮನಾರ್ಹವಾದದ್ದು ಎಂದು ಪಾಶ್ಚಿಮಾತ್ಯ ರಾಷ್ಟ್ರಗಳ ಗುಪ್ತ ವರದಿಗಳು ತಿಳಿಸಿವೆ.