ನವದೆಹಲಿ, ಜೂನ್ 16– ಆಡಳಿತ ಕಾಂಗ್ರೆಸ್ ಸದಸ್ಯೆ ಶ್ರೀಮತಿ ಲಕ್ಷ್ಮೀಕಾಂತಮ್ಮ ಅವರ ಐಎಎಸ್ ಅಧಿಕಾರಿ ಆಗುವ ಆಸೆ, ಆಕಾಂಕ್ಷೆ ಈಡೇರದೇ ಹೋಯಿತು. ಕಾರಣ ಅವರು ವಿವಾಹಿತರು.
ಐಎಎಸ್ ಮತ್ತು ಐಎಫ್ಎಸ್ ಪರೀಕ್ಷೆ ಗಳಿಗೆ ಮಹಿಳೆಯರು ಕೂಡುವುದರ ವಿರುದ್ಧ ಇಂತಹ ನಿಷೇಧಗಳನ್ನು ಹೇರಿರುವುದಕ್ಕಾಗಿ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೋತ್ತರ ಕಾಲದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ತಾವು ವಿವಾಹ ಬಂಧನಕ್ಕೊಳಗಾದ ಕಾರಣ, ಪದವಿ ಪಡೆದ ಕೂಡಲೇ ಐಎಎಸ್ ಪರೀಕ್ಷೆಗೆ ಕೂಡಲಾಗಲಿಲ್ಲ ಎಂದವರು ತಿಳಿಸಿದರು.
‘ಐಎಎಸ್ಗೆ ಆದ ನಷ್ಟ ಲೋಕಸಭೆಗೆ ವರವಾಗಿ ಪರಿಣಮಿಸಿದೆ’ ಎಂದು ಗೃಹಖಾತೆ ರಾಜ್ಯ ಸಚಿವ ರಾಂನಿವಾಸ ಮಿರ್ಧಾ ನುಡಿದರು.
ಸ್ಪೀಕರ್ ಧಿಲ್ಲೋನ್ ‘ನೀವು ಇನ್ನೂ ಕೆಲವು ಕಾಲ ಕಾಯಬೇಕಾಗಿತ್ತು’ ಎಂದು ನಗೆಯಾಡಿದರು.