ಹೈದರಾಬಾದ್, ಸೆ. 25– ಶಿಕ್ಷಣ ಸಚಿವ ಪಿ.ವಿ. ನರಸಿಂಹರಾವ್ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾಗಿ ಇಂದು ಚುನಾಯಿತರಾದರು.
ಕಾಂಗ್ರೆಸ್ ಹೈಕಮಾಂಡ್ ಪ್ರತಿನಿಧಿಗಳಾದ ಸಿ. ಸುಬ್ರಹ್ಮಣ್ಯಂ ಮತ್ತು ಉಮಾಶಂಕರ ದೀಕ್ಷಿತ್ ಅವರು ಇಂದು ರಾತ್ರಿ ಇಲ್ಲಿ ಸಮಾವೇಶಗೊಂಡಿದ್ದ ಪಕ್ಷದ ಸಭೆಯಲ್ಲಿ ಕೆ. ಬ್ರಹ್ಮಾನಂದ ರೆಡ್ಡಿ ಅವರ ಉತ್ತರಾಧಿಕಾರಿಯ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದರು.
ಈ ನಿರ್ಧಾರಕ್ಕೆ ಪಕ್ಷದ ಶಾಸಕರೆಲ್ಲರ ಬೆಂಬಲ ಸಿಕ್ಕಿರುವುದಾಗಿ ತಿಳಿದುಬಂದಿದೆ.
ಪದಚ್ಯುತ ಮುಖ್ಯಮಂತ್ರಿ ಬ್ರಹ್ಮಾನಂದ ರೆಡ್ಡಿ ಅವರು ನರಸಿಂಹರಾವ್ ಅವರ ಹೆಸರನ್ನು ಸೂಚಿಸಿದರು. ಎಪಿಸಿಸಿ ಅಧ್ಯಕ್ಷ ನರಸಾರೆಡ್ಡಿ ಅವರು ಅನುಮೋದಿಸಿದರು.
ಹೊಸ ನಾಯಕನ ಆಯ್ಕೆಗೆ ಮುಂಚೆ ನಾಲ್ಕು ಗಂಟೆ ಕಾಲ ಹೈಕಮಾಂಡ್ ಪ್ರತಿನಿಧಿಗಳು ಸೇರಿದಂತೆ ಹಲವು ನಾಯಕರು ಚರ್ಚೆ ನಡೆಸಿದರು.