ನೆರವು ನೀಡಿಕೆಗೆ ಕೇಂದ್ರ ತಜ್ಞರ ತಂಡ ಇನ್ನೂ ರಾಜ್ಯಕ್ಕೆ ಭೇಟಿ ಕೊಡದಿರುವ ಬಗ್ಗೆ ಆತಂಕ
ಬೆಂಗಳೂರು, ಆ. 18–ಎರಡು ವಾರಗಳ ಹಿಂದೆ, ಅಭಾವಪೀಡಿತ ತಾಲ್ಲೂಕುಗಳ ಸಂಖ್ಯೆ ಸುಮಾರು 60 ಇದ್ದಿದ್ದು, ಇದೀಗ ಆ ಸಂಖ್ಯೆ 106ಕ್ಕೇರಿದೆಯಾದರೂ ಕೇಂದ್ರದಿಂದ ನೆರವು ಶಿಫಾರಸು ಮಾಡಲಿರುವ ತಜ್ಞರ ತಂಡ, ಮೈಸೂರಿಗೆ ಭೇಟಿ ಕೊಡುವ ಸೂಚನೆಗಳು ಇನ್ನೂ ಕಂಡುಬರುತ್ತಿಲ್ಲ.
ಬಿಜಾಪುರ, ಬೀದರ್, ಗುಲ್ಬರ್ಗ, ರಾಯಚೂರುಗಳಂಥ ಜಿಲ್ಲೆಗಳ ಹೆಚ್ಚಿನ ತಾಲ್ಲೂಕುಗಳಲ್ಲಿ ಹೆಚ್ಚು ಕಡಿಮೆ ಕ್ಷಾಮಪರಿಸ್ಥಿತಿಯೇ ತೀವ್ರ ಕಳವಳಕ್ಕೆಡೆಯಾಗಿದೆ.
ಪರಿಸ್ಥಿತಿ ತೀವ್ರವಾಗಿರುವ ಕಡೆಗಳಲ್ಲಿ ದಿವಸಕ್ಕೆ ಎರಡು ಲಕ್ಷ ಜನರಿಗೆ ನಿರಂತರವಾಗಿ ನೂರು ದಿನಗಳಿಗೆ ಉದ್ಯೋಗ ಕೊಡುವ ಆರೇಳು ಕೋಟಿ ರೂಪಾಯಿಗಳ ಕಾಮಗಾರಿಗಳು ಮಂಜೂರಾಗಿ, ಆರಂಭವಾಗಿದೆಯಾದರೂ, ಅದು ಸಮಸ್ಯೆಗೆ ಸಾಕಷ್ಟು ಪರಿಹಾರ ನೀಡುವಂತಿಲ್ಲ.
ಈ ಘಟ್ಟದಲ್ಲಿ ಕೇಂದ್ರದ ತಕ್ಷಣ ನೆರವು ಅಗತ್ಯ. ಅದನ್ನು ಮನಗಂಡೇ ಈ ತಿಂಗಳ ಆದಿ ಭಾಗದಲ್ಲೇ ರಾಜ್ಯಪಾಲರು, ದೆಹಲಿಗೆ ಈ ಬಗ್ಗೆ ತುರ್ತು ಸಂದೇಶ ಕಳುಹಿಸಿ, ತಜ್ಞರ ತಂಡವನ್ನು ಕೂಡಲೇ ಕಳುಹಿಸಿ ಕೊಡುವಂತೆ ಕೇಳಿಕೊಂಡರು. ಆದರೆ, ತಂಡದ ಆಗಮನದ ಬಗ್ಗೆ ಕೇಂದ್ರದಿಂದ ನಿರ್ದಿಷ್ಟ ಸೂಚನೆ ಇನ್ನೂ ಬಂದಿಲ್ಲ ಎಂದು ಅಧಿಕೃತ ವಕ್ತಾರರೊಬ್ಬರು ತಿಳಿಸಿದರು.