ಮಾನವರಿರುವ ರಷ್ಯಾದ ಅಂತರಿಕ್ಷನೌಕೆ ಪ್ರಯೋಗ
ಮಾಸ್ಕೋ, ಸೆ. 27– ಮಾನವರಿರುವ ಅಂತರಿಕ್ಷ ನೌಕೆ ಸೋಯುಜ್ ಅನ್ನು ರಷ್ಯಾ ಇಂದು ಹಾರಿಬಿಟ್ಟಿತೆಂದು ತಾಸ್ ವಾರ್ತಾ ಸಂಸ್ಥೆ ಪ್ರಕಟಿಸಿದೆ.
ನೌಕೆಯಲ್ಲಿ ಎಷ್ಟು ಜನರಿದ್ದಾರೆಂಬುದನ್ನು ಪ್ರಕಟಣೆ ತಿಳಿಸಲಿಲ್ಲವಾದರೂ, ಅಂತರಿಕ್ಷ ಯಾತ್ರಿಗಳ ನಾಯಕತ್ವವನ್ನು ಕರ್ನಲ್ ವಾಸಿಲಿ ಲಾಜರೆವ್ ವಹಿಸಿದ್ದಾರೆಂದು ತಿಳಿಸಿತು.
ಕಚ್ಚಾರೇಷ್ಮೆ ರಫ್ತು ನಿಷೇಧ
ನವದೆಹಲಿ, ಸೆ. 27– ಈ ವರ್ಷದ ಅಂತ್ಯದವರೆಗೆ ಕಚ್ಚಾ ರೇಷ್ಮೆ ರಫ್ತನ್ನು ಸರ್ಕಾರ ನಿಷೇಧಿಸಿದೆ.
ಕೈಮಗ್ಗದ ನೇಕಾರರು ಮತ್ತು ರಫ್ತು ಉತ್ಪಾದಕರು ಮಾಡಿಕೊಂಡ ಮನವಿಯ ನಂತರ ಸರ್ಕಾರವು ಈ ಕ್ರಮವನ್ನು ಕೈಗೊಂಡಿತು.
ಕನಕಪುರದ ಬಳಿ ಕೆರೆ ಒಡೆದು ಇಬ್ಬರ ಜಲಸಮಾಧಿ
ಕನಕಪುರ, ಸೆ. 27– ನಿನ್ನೆ ರಾತ್ರಿ ಬಿದ್ದ ಭಾರಿ ಮಳೆಯಿಂದಾಗಿ ಕನಕಪುರದ ಬಳಿಯ ಮಾವತ್ತೂರು ಕೆರೆಯ ಕಟ್ಟೆ ಇಂದು ಬೆಳಿಗ್ಗೆ ಒಡೆದು, ಇಬ್ಬರು ಮಹಿಳೆಯರು ಜಲಸಮಾಧಿ ಹೊಂದಿದರಲ್ಲದೆ, ಹಾರೋಹಳ್ಳಿ ಮತ್ತು ಕನಕಪುರದ ಸುತ್ತಮುತ್ತ ಲಕ್ಷಾಂತರ ರೂಪಾಯಿ ಬೆಲೆಯ ಬೆಳೆಗಳಿಗೆ ನಷ್ಟ ಉಂಟಾಗಿದೆಯೆಂದು ತಿಳಿದು ಬಂದಿದೆ.
ಕೆರೆ ಒಡೆದು ನೀರಿನ ಪ್ರವಾಹ, ಸಮೀಪದಲ್ಲಿದ್ದ ಗುಡಿಸಲೊಂದನ್ನು ಕೊಚ್ಚಿಕೊಂಡು ಹೋಯಿತೆಂದೂ, ಗುಡಿಸಲಲ್ಲಿ ಇದ್ದ 8 ಮಂದಿಯಲ್ಲಿ ಇತರರು ತೆಂಗಿನ ಮರವನ್ನು ಏರಿದ್ದರೆಂದೂ, ಸಣ್ಣಮ್ಮ (55) ಮತ್ತು ಅವರ ಪುತ್ರಿ ಲಕ್ಷಮ್ಮ (30) ಎಂಬ ಇಬ್ಬರು ಮಹಿಳೆಯರನ್ನು ನೀರಿನ ಪ್ರವಾಹ ಸೆಳೆದುಕೊಂಡು ಹೋಯಿತೆಂದೂ ವರದಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.