ಒಡೆದ ನಂತರವೂ ಕಾಂಗ್ರೆಸ್ ಜಡತ್ವ ಹೋಗಲಿಲ್ಲ
ನವದೆಹಲಿ, ಜ. 4– ಕಾಂಗ್ರೆಸ್ 1969ರಲ್ಲಿ ಒಡೆದು ಎರಡು ಹೋಳಾಯಿತು. ಆನಂತರ ಕಾಂಗ್ರೆಸ್ ಪಕ್ಷದ ಕಾರ್ಯನಿರ್ವಹಣೆ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರಿಗೆ ನಿರಾಶೆಯುಂಟು ಮಾಡಿದೆ.
ಉಮಾ ವಾಸುದೇವ್ ಅವರಿಗೆ ಕಳೆದ ವರ್ಷ ಸೆ. 25ರಂದು ನೀಡಿದ ಸಂದರ್ಶನದಲ್ಲಿ ಇಂದಿರಾ ಗಾಂಧಿಯವರು ಈ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಶನವನ್ನು ಉಮಾ ವಾಸುದೇವ್ ಅವರು ರಚಿಸಿರುವ ಇಂದಿರಾ ಗಾಂಧಿಯವರ ಜೀವನಚರಿತ್ರೆ ಪುಸ್ತಕದ ಕೊನೆಯ ಅಧ್ಯಾಯವಾಗಿ
ಪ್ರಕಟಿಸಲಾಗಿದೆ.
ಕಾಂಗ್ರೆಸ್ ಪಕ್ಷ ಇನ್ನೂ ಸತ್ವರಹಿತವಾಗಿಯೇ ಕಾರ್ಯನಿರ್ವಹಿಸುತ್ತಿದೆ, ಅದರ ಜಡತ್ವ ಹೋಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಣ್ಣ ಪ್ರಮಾಣದ ಉದ್ಯಮಕ್ಕೆ ಪರಿಣಾಮಕಾರಿ ನೆರವು ನೀಡುವ ಕ್ರಮಕ್ಕೆ ಹೊಸ ಸ್ವರೂಪ
ಬೆಂಗಳೂರು, ಜ. 4– ರಾಜ್ಯದ ಸಣ್ಣ ಪ್ರಮಾಣದ ಉದ್ಯಮಗಳಿಗೆ ಹೆಚ್ಚು
ಪರಿಣಾಮಕಾರಿಯಾಗಿ ನೆರವಾಗುವ ರೀತಿಯಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಕಾರ್ಪೊರೇಷನ್ನಿನ ಹೊಣೆಗಾರಿಕೆ ಮತ್ತು ಕಾರ್ಯಕ್ರಮಗಳನ್ನು ಪುನರ್ ರೂಪಿಸಲಾಗುತ್ತಿದೆ.