ರೈಲ್ವೆ ಮುಷ್ಕರ: ಎರಡೂ ಕಡೆ ಬಿಗಿ ಪಟ್ಟು
ನವದೆಹಲಿ, ಮೇ 7– ಬಂಧಿತ ರೈಲ್ವೆ ಕಾರ್ಮಿಕ ನಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒಂದುಕಡೆ ವಿರೋಧ ಪಕ್ಷಗಳ ಸದಸ್ಯರು ಒತ್ತಾಯ ಮಾಡುತ್ತಿದ್ದರೆ, ಇನ್ನೊಂದು ಕಡೆ ಮುಷ್ಕರ ನೋಟಿಸು ವಾಪಸ್ ತೆಗೆದುಕೊಳ್ಳುವವರೆಗೆ ಬೇಡಿಕೆಗಳನ್ನು ಪರಿಶೀಲಿಸಲು ಸರ್ಕಾರ ನಿರಾಕರಿಸುತ್ತಿದ್ದು, ಸಂಸತ್ತಿನ ಉಭಯ ಸದನಗಳಲ್ಲೂ ಇಂದು ಕೋಲಾಹಲ ಆವರಿಸಿಕೊಂಡಿತ್ತು.
ಲೋಕಸಭೆಯಲ್ಲಿ ಸೋಷಲಿಸ್ಟ್ ಮತ್ತು ಕಮ್ಯುನಿಸ್ಟ್ ಸದಸ್ಯರು ಹಾಗೂ ಕಾಂಗ್ರೆಸ್ ಸದಸ್ಯರು ಪದೇ ಪದೇ ಚಕಮಕಿಯಲ್ಲಿ ತೊಡಗಿದ್ದರಿಂದ ಇಡೀ ಪ್ರಶ್ನೋತ್ತರ ಕಾಲ ರೈಲ್ವೆ ಕೆಲಸಗಾರರ ಮುಷ್ಕರದ ವಿಷಯದಲ್ಲಿ ಮುಳುಗಿ ಹೋಯಿತು.
‘ನಾಕುತಂತಿ’ ಮಿಡಿದ ವರಕವಿ ಬೇಂದ್ರೆಗೆ ವಿದ್ಯಾರ್ಥಿ ನಮನ
ಬೆಂಗಳೂರು, ಮೇ 7– ಜನದ ಭಾಷೆಯನ್ನು ಕಾವ್ಯ ಭಾಷೆಯನ್ನಾಗಿ ಮಾಡಿದ ‘ನಾಕುತಂತಿ’ ಕರ್ತೃ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ಬೆಂಗಳೂರು ವಿಶ್ವವಿದ್ಯಾನಿಯಲ ವಿದ್ಯಾರ್ಥಿ ಮಂಡಲಿ ಇಂದು ಇಲ್ಲಿ ಸನ್ಮಾನಿಸಿ, ‘ತನ್ನನ್ನು ತಾನು ಗೌರವಿಸಿಕೊಂಡಿತು’
ಕವಿ, ಆಚಾರ್ಯರು ವಿದ್ಯಾರ್ಥಿಗಳ ಈ ಕಾರ್ಯವನ್ನು ಶ್ಲಾಘಿಸಿದರು.