ನವದೆಹಲಿ, ಮಾರ್ಚ್ 21– ರಾಷ್ಟ್ರದ ಕೆಲವು ಕಡೆ ನಡೆಯುತ್ತಿರುವ ಹಿಂಸಾಚಾರಕ್ಕಾಗಿ ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ವ್ಯಥೆ ವ್ಯಕ್ತಪಡಿಸಿ, ಇದು ಪ್ರಜಾತಂತ್ರ ಹಾಗೂ ರಾಷ್ಟ್ರದ ರೀತಿನೀತಿಗಳ ವಿರುದ್ಧ ಕೆಲವು ಶಕ್ತಿಗಳು ಎಸಗಿರುವ ‘ದಾಳಿ’ ಎಂದು ವರ್ಣಿಸಿದರು.
ಭಾರತ ರಾಷ್ಟ್ರೀಯ ಗಣಿ ಕೆಲಸಗಾರರ ಫೆಡರೇಷನ್ನಿನ ರಜತ ಮಹೋತ್ಸವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಗಾಂಧಿ ಅವರು, ಚುನಾವಣೆ ಫಲಿತಾಂಶಗಳನ್ನು ತಪ್ಪು ಮಾರ್ಗಗಳಿಂದ ಬುಡಮೇಲು ಮಾಡುವುದು ಈ ಶಕ್ತಿಗಳ ಬಯಕೆ. ಇಂತಹ ಕೆಲವರು ಈ ಚಳವಳಿಗಳಿಗೆ ಸಂಬಂಧಪಡದ ಬಹುಸಂಖ್ಯಾ ತರ ಧ್ವನಿ ಅದುಮಿ ಹಾಕಲು ಭೀತಗ್ರಸ್ತ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದರು.
ರಾಜ್ಯಸಭೆಗೆ ಕೊಲ್ಲೂರು, ಆಳ್ವ, ರಾಚಯ್ಯ, ಲಕ್ಷ್ಮಣಗೌಡ
ಬೆಂಗಳೂರು, ಮಾರ್ಚ್ 21– ವಿಧಾನಸಭೆಯ ಕಾಂಗ್ರೆಸ್ ಸದಸ್ಯರು ಮತಾಂತರ ಮಾಡದೆ ಶಿಸ್ತಿನಿಂದ ಮತ ಚಲಾಯಿಸಿದ್ದರಿಂದ, ಪಕ್ಷದ ಅಭ್ಯರ್ಥಿಗಳಾದ ಕೊಲ್ಲೂರು ಮಲ್ಲಪ್ಪ, ಬಿ.ರಾಚಯ್ಯ, ಮಾರ್ಗರೇಟ್ ಆಳ್ವ ಹಾಗೂ ಪಕ್ಷ ಬೆಂಬಲ ನೀಡಿದ ಪಕ್ಷೇತರ ಅಭ್ಯರ್ಥಿ ಯು.ಕೆ. ಲಕ್ಷ್ಮಣಗೌಡ ರಾಜ್ಯಸಭೆಗೆ ಆಯ್ಕೆಯಾದರು.
ನಾಲ್ಕು ಸ್ಥಾನಗಳಿಗೆ ಐದು ಮಂದಿ ಸ್ಪರ್ಧಿ ಸಿದ್ದು, ಕಾಂಗ್ರೆಸ್ಸಿನ ಹೆಚ್ಚುವರಿ ಮತಗಳನ್ನು ಪಡೆದ ಯು.ಕೆ. ಲಕ್ಷ್ಮಣಗೌಡ ಅವರು ಸಂಸ್ಥಾ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ಗುರುಪಾದಸ್ವಾಮಿ ಅವರನ್ನು ಸೋಲಿಸಿದರು.