ಹುಬ್ಬಳ್ಳಿ, ನ. 30– ಮುಂದಿನ ಮೂರು ವರ್ಷಗಳಲ್ಲಿ ಆಡಳಿತದ ಎಲ್ಲ ಮಟ್ಟಗಳಲ್ಲಿ ಕನ್ನಡವು ರಾಜ್ಯದ ಅಧಿಕೃತ ಭಾಷೆಯಾಗುವುದು.
ಈ ವಿಷಯವನ್ನು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದ ಶಿಕ್ಷಣ ಸಚಿವ ಶ್ರೀ ಕೆ.ವಿ.ಶಂಕರಗೌಡರು, ಈ ದಿಸೆಯಲ್ಲಿ ಕ್ರಮಗಳನ್ನು ಸಿದ್ಧಪಡಿಸಲು ನೇಮಕಗೊಂಡ ತಜ್ಞರ ಸಮಿತಿ ವರದಿಗಾಗಿ ಸರ್ಕಾರ ಕಾಯುತ್ತಿದೆ ಎಂದರು.
ಎಲ್ಲ ಮಟ್ಟಗಳಲ್ಲೂ ಒಮ್ಮೆ ಕನ್ನಡ ಅಧಿಕೃತ ಭಾಷೆ ಆಯಿತೆಂದರೆ, ಕಾಲೇಜುಗಳಲ್ಲಿ ಶಿಕ್ಷಣ ಮಾಧ್ಯಮ ಕನ್ನಡಕ್ಕೆ ಬದಲಾವಣೆಯಾಗುವುದೆಂಬ ನಂಬಿಕೆ ತಮಗಿದೆಯೆಂದು ನುಡಿದು, ವಿದ್ಯಾರ್ಥಿಗಳೂ ಅದನ್ನು ಆಯ್ದುಕೊಳ್ಳುವರೆಂದರು.
ಮಂಗಳೂರು– ಮುಂಬೈ ಪಶ್ಚಿಮ ಕರಾವಳಿ ರೈಲ್ವೆ ಐದಾರು ವರ್ಷಗಳಲ್ಲಿ ಸಿದ್ಧ
ಬೆಂಗಳೂರು, ನ. 30– ಕೇಂದ್ರ ಸರ್ಕಾರದ ದೃಷ್ಟಿಯಲ್ಲಿ ಇದೀಗ ‘ರಾಷ್ಟ್ರೀಯ ಪ್ರಾಮುಖ್ಯ’ ಪಡೆದಿರುವ ಮಂಗಳೂರು– ಮುಂಬೈ ಪಶ್ಚಿಮ ಕರಾವಳಿ ರೈಲ್ವೆ ಯೋಜನೆಯು ‘ಐದಾರು ವರ್ಷಗಳೊಳಗೆ’ ಓಡಾಟಕ್ಕೆ ಸಿದ್ಧವಾಗುವುದು ಖಚಿತವೆನಿಸಿದೆ.
ಸುಮಾರು ₹200 ಕೋಟಿ ಅಂದಾಜು ವೆಚ್ಚದ 900 ಕಿಲೊಮೀಟರುಗಳುದ್ದದ ಈ ರೈಲ್ವೆ ದಾರಿಯ ನಿರ್ಮಾಣ ಪೂರ್ವ ಸಮೀಕ್ಷೆಯು ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಆರಂಭವಾಗಿದೆ.