ದಕ್ಷಿಣದಲ್ಲೇ ಕೇಂದ್ರ ವಿಶ್ವವಿದ್ಯಾಲಯ ಆಗುವಂತೆ ಶ್ರಮಿಸಲು ಕರೆ
ಬೆಂಗಳೂರು, ಜ. 17– ದಕ್ಷಿಣ ಭಾರತದ ಪ್ರಥಮ ಕೇಂದ್ರೀಯ ವಿಶ್ವವಿದ್ಯಾಲಯವಾಗಲು ಸರ್ವ ಅರ್ಹತೆಯಿರುವ ಬೆಂಗಳೂರು ವಿಶ್ವವಿದ್ಯಾಲಯವು ಆ ಸ್ಥಾನಕ್ಕೇರಲು ಸರ್ವ ಪ್ರಯತ್ನ ಮಾಡಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎ.ಎಸ್.ಅಡ್ಯ ಅವರು ಇಂದು ಇಲ್ಲಿ ಹೇಳಿದರು.
‘ಬೆಂಗಳೂರಿನ ಎಲ್ಲ ಕಾಲೇಜುಗಳು ಈ ಗುರಿಯನ್ನಿಟ್ಟುಕೊಂಡು ಮುಂದುವರಿದರೆ, ಅದರ ಸಾಧನೆ ಕಷ್ಟವಾಗದು’ ಎಂದು ಹೇಳಿದ ಶ್ರೀಯುತರು, ‘ಬೆಂಗಳೂರು ವಿಶ್ವವಿದ್ಯಾಲಯವು ಸ್ಥಾಪನೆಗೊಳ್ಳುವಾಗಲೇ ಅದು ಕೇಂದ್ರೀಯ ವಿಶ್ವವಿದ್ಯಾಲಯವಾಗಿ ಅಸ್ತಿತ್ವಕ್ಕೆ ಬರಬೇಕೆಂಬ ಸೂಚನೆಯಿತ್ತು’ ಎಂಬುದನ್ನು ಜ್ಞಾಪಿಸಿಕೊಂಡರು.
‘ನಾಯಕರು ಪ್ರಗತಿ ಸಾಧಿಸುವತನಕ ಜನ ಕಾಯರು’
ಮುಂಬಯಿ, ಜ. 17– ಎರಡು ಪಟ್ಟು ವೇಗದಲ್ಲಿ ರಾಷ್ಟ್ರವು ಪ್ರಗತಿ ಸಾಧಿಸಬೇಕು, ಅಲ್ಲದೆ ತ್ವರಿತವಾಗಿ ದಾರಿದ್ರ್ಯವನ್ನು ತೊಲಗಿಸಬೇಕು ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಹೇಳಿದರು.
ಇಲ್ಲಿ ಆಡಳಿತ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಚಾರವನ್ನು ಉದ್ಘಾಟಿಸಿದ ಪ್ರಧಾನಿ ಅವರು ‘ರಾಷ್ಟ್ರದ ಪ್ರಗತಿ ಬಗ್ಗೆ ಜನ ಅಸಮಾಧಾನಗೊಂಡಿದ್ದಾರೆ. ಜನರು ಬಯಸುವ ಬದಲಾವಣೆಯನ್ನು ನಾಯಕರು ಸಾಧಿಸಿಕೊಡುವವರೆಗೂ ಜನ ಕಾದು ಕೂತಿರುವುದಿಲ್ಲ’ ಎಂದೂ ಎಚ್ಚರಿಸಿದರು.