ಬೆಂಗಳೂರು, ಏ. 5– ರಾಜ್ಯ ಸರ್ಕಾರಿ ನೌಕರರು ಅಖಿಲ ಭಾರತ ಕಾರ್ಯಕ್ರಮದಂತೆ ಏಪ್ರಿಲ್ 9ರಂದು ಮುಷ್ಕರ ಹೂಡುವುದು ಅಕ್ರಮವಾಗುವುದಲ್ಲದೇ ಶಿಸ್ತಿನ ಕ್ರಮಗಳನ್ನು ಎದುರಿಸಬೇಕಾಗುವುದೆಂದು ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ಎಚ್ಚರಿಕೆ ನೀಡಿದರು.
ಮುಷ್ಕರದ ಬಗ್ಗೆ ಶ್ರೀ ಕೋಣಂದೂರು ಲಿಂಗಪ್ಪ ಅವರು ಪ್ರಶ್ನೋತ್ತರವಾದ ನಂತರ ಮುಖ್ಯಮಂತ್ರಿಗಳ ಗಮನ ಸೆಳೆದರು.
ಆಹಾರ ಬೆಲೆಗಳನ್ನು ಇಳಿಸುವುದು, ವೇತನ ಭತ್ಯೆಗಳ ಪರಿಷ್ಕರಣೆ ಮುಂತಾದ ಬೇಡಿಕೆಗಳ ಬಗ್ಗೆ ಇಂದು ಸಂಜೆ ಸಭೆ ನಡೆಯುವುದು ತಮಗೆ ಗೊತ್ತಿದೆಯೆಂದು ಮುಖ್ಯಮಂತ್ರಿ ತಿಳಿಸಿ ‘ಸಭೆ, ಮುಷ್ಕರಗಳಿಂದ ಸಮಸ್ಯೆ ಪರಿಹಾರವಾಗುವುದಿಲ್ಲ’ ಎಂದರು.
ನೌಕರರ ಬೇಡಿಕೆಗಳ ಬಗ್ಗೆ ಮಾನ್ಯ ಸದಸ್ಯರಷ್ಟೇ ಸರ್ಕಾರಕ್ಕೂ ಸಹಾನುಭೂತಿಯಿದೆ. ಆದರೆ, ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ನೌಕರರ ವೇತನ ಭತ್ಯೆಗಳನ್ನು ಪರಿಷ್ಕರಿಸುತ್ತಿರುವುದು ತಾರತಮ್ಯಕ್ಕೆ ಅವಕಾಶ ಆಗಿದೆಯೆಂದು ಶ್ರೀ ಅರಸು ಹೇಳಿದರು.