ರಾಜ್ಯ ವಿಧಾನಸಭೆ ವಿಸರ್ಜನೆ ಇಲ್ಲ ಬೆಂಗಳೂರು, ಜ.2– ಇಂದು ನಡೆದ ಮಂತ್ರಿಮಂಡಲದ ಅನೌಪಚಾರಿಕ ಸಭೆ ವಿಧಾನಸಭೆಯ ವಿಸರ್ಜನೆ ಕುರಿತು ‘ಯೋಚಿಸಬಾರದೆಂದು’ ಸರ್ವಾನುಮತದಿಂದ ತೀರ್ಮಾನಿಸಿತು.
ಸಚಿವರು, ರಾಜ್ಯ ಸಚಿವರು ಹಾಗೂ ಉಪಸಚಿವರು ಹಾಜರಿದ್ದ ಈ ಸನೌಪಚಾರಿಕ ಸಭೆ ಸುಮಾರು ಎರಡು ಗಂಟೆಗಳ ಕಾಲ ಲೋಕಸಭೆಯ ಮಧ್ಯಂತರ ಚುನಾವಣೆಯ ಜೊತೆಗೆ ಚುನಾವಣೆ ನಡೆಸಲು ವಿಧಾನಸಭೆಯನ್ನು ವಿಸರ್ಜಿಸಬೇಕೆ ಬೇಡವೇ ಎಂಬ ಪ್ರಶ್ನೆಯನ್ನು ‘ಸರ್ವಮುಖಗಳಿಂದ ಪರಿಶೀಲಿಸಿ’ ಈ ಒಮ್ಮತದ ತೀರ್ಮಾನಕ್ಕೆ ಬಂದಿತು.
ಸಭೆಯ ತೀರ್ಮಾನವನ್ನು ವರದಿಗಾರರಿಗೆ ತಿಳಿಸಿದ ಮುಖ್ಯಮಂತ್ರಿ ಶ್ರೀ ವೀರೇಂದ್ರಪಾಟೀಲ್ ಅವರು ಈ ಪ್ರಶ್ನೆಯ ಬಗ್ಗೆ ಮಂತ್ರಿಮಂಡಲದಲ್ಲಿ ಭಿನ್ನಾಭಿಪ್ರಾಯಗಳಿವೆಯಂಬ ವರದಿಯನ್ನು ನಿರಾಕರಿಸಿದರು.