ಬೆಂಗಳೂರು, ನ. 12– ‘ಬೇರೆ ರಾಷ್ಟ್ರಗಳು ಒಡ್ಡಬಹುದಾದ ಯಾವುದೇ ರೀತಿಯ ಸವಾಲನ್ನು ಎದುರಿಸಲು ದೇಶದ ರಕ್ಷಣಾ ವ್ಯವಸ್ಥೆ ಅತ್ಯಂತ ಸಮರ್ಥವಾಗಿದೆ’ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಸುರೇಶ್ ಪಚೌರಿ ಇಂದು ಇಲ್ಲಿ ಹೇಳಿದರು.
‘ಪಾಕಿಸ್ತಾನ ಮತ್ತು ಇತರ ಕೆಲವು ನೆರೆ ರಾಷ್ಟ್ರಗಳು ಈಚೆಗೆ ಅಮೆರಿಕದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಸಮರ ವಿಮಾನಗಳನ್ನು ಪಡೆದ ಹಿನ್ನೆಲೆಯಲ್ಲಿ ಯಾರೂ ಆತಂಕ ಪಡಬೇಕಾಗಿಲ್ಲ. ದೇಶದ ಗಡಿಯೊಳಗೆ ಯಾವುದೇ ಹೊರಗಿನ ಶಕ್ತಿ ನುಸುಳದಂತೆ ತಡೆಯಲು ನಾವೂ ಅಷ್ಟೇ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಸಮರ ವಿಮಾನಗಳೊಂದಿಗೆ ಸನ್ನದ್ಧರಾಗಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದರು.
ಶ್ರೀಲಂಕಾ ಸೇನೆ ಜಾಫ್ನಾ ಪ್ರವೇಶ
ಕೊಲಂಬೊ, ನ. 12 (ಯುಎನ್ಐ, ಪಿಟಿಐ)– ಎಲ್ಟಿಟಿಇ ಉಗ್ರಗಾಮಿಗಳ ಕೇಂದ್ರ ಸ್ಥಳವಾದ ಜಾಫ್ನಾ ನಗರಕ್ಕೆ ಅಡಿಯಿಟ್ಟಿರುವ ಶ್ರೀಲಂಕಾ ಸೇನಾಪಡೆ ಇಂದು ನಡೆದ ಕಾಳಗದಲ್ಲಿ ಸುಮಾರು 60 ಉಗ್ರಗಾಮಿಗಳನ್ನು ಕೊಂದಿದೆ. ಹೋರಾಟದಲ್ಲಿ 15 ಯೋಧರು ಸತ್ತರು.
ಈ ಪಟ್ಟಣದ ವಶದಿಂದಾಗಿ ಎಲ್ಟಿಟಿಇ ಉಗ್ರಗಾಮಿಗಳಿಗೆ ಭಾರಿ ಸೋಲು ಉಂಟಾಗಿದೆ. ಅಡ್ಡಾದಿಡ್ಡಿಯಾಗಿ ಬೆಳೆದಿರುವ ಪಟ್ಟಣದಲ್ಲಿ ಬೀಡುಬಿಟ್ಟಿರುವ ಸೈನಿಕರು, ಹಲವಾರು ಅಡಗುತಾಣಗಳಿಂದ ಹಾರುವ ಉಗ್ರಗಾಮಿಗಳ ಬಂದೂಕುಗಳ ಗುಂಡುಗಳನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ.