ಈರೋಡ್, ನ. 15 (ಪಿಟಿಐ, ಯುಎನ್ಐ)– ಒತ್ತೆಯಾಳುಗಳ ಬಿಡುಗಡೆಗೆ ಮೂರು ಕೋಟಿ ರೂಪಾಯಿಗಳನ್ನು ನೀಡಬೇಕೆಂಬ ತನ್ನ ಷರತ್ತಿಗೆ ಪ್ರತಿಕ್ರಿಯಿಸಲು ತಮಿಳುನಾಡು ಸರ್ಕಾರಕ್ಕೆ ವೀರಪ್ಪನ್ ನೀಡಿರುವ ಗಡುವು ಇಂದು ಸಂಜೆಗೆ ಅಂತ್ಯವಾಗಿದ್ದು, ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ವಿಫಲವಾಗಿದೆ.
ಈ ಸಮಸ್ಯೆಯನ್ನು ನಿವಾರಿಸಲು ಮುಂದಿನ ಕಾರ್ಯಯೋಜನೆಯ ಬಗೆಗೆ ಸರ್ಕಾರ ಯೋಚಿಸುತ್ತಿದ್ದು, ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ವೀರಪ್ಪನ್ಗೆ ಹಣ ನೀಡುವ ಕುರಿತು ಸರ್ಕಾರದೊಳಗೆ ಭಿನ್ನಾಭಿಪ್ರಾಯಗಳಿವೆ.
ಈ ಮಧ್ಯೆ, ಒತ್ತೆಯಾಳುಗಳ ರಕ್ಷಣೆಗಾಗಿ ಪೊಲೀಸ್ ಪಡೆ ಸಿದ್ಧವಾಗಿದ್ದು, ಸರ್ಕಾರದ ಆದೇಶಕ್ಕೆ ಎದುರು ನೋಡುತ್ತಿದೆ ಎಂದು ತಿಳಿದುಬಂದಿದೆ.
ಹಣ ಹೊರುವ ರಹಸ್ಯ
ಮ್ಯೂನಿಚ್, ನ. 15 (ಎಪಿ)– ಇಲ್ಲಿ 80 ವರ್ಷದ ಮಹಿಳೆಯೊಬ್ಬಳು ಹಣದ ಹೊರೆ ಹೊತ್ತು ವಾಕಿಂಗ್ ಹೋಗುತ್ತಾಳೆ.
ಬ್ಯಾಂಕ್ನಲ್ಲಿ ವಿಶ್ವಾಸ ಇಲ್ಲದ ಈಕೆ ತನ್ನ ಜೀವಾವಧಿ ಉಳಿತಾಯವನ್ನು ಸದಾ ಹೊತ್ತು ತಿರುಗಾಡುತ್ತಾಳೆ. ಸುಮಾರು 1.18 ಲಕ್ಷ ಡಾಲರ್ಗಳನ್ನು ಹೊತ್ತು ಷಾಪಿಂಗ್ಗೆ ಬಂದಾಗ ಆಶ್ಚರ್ಯಚಕಿತನಾದ ಕ್ಯಾಷಿಯರ್ ಪೊಲೀಸರಿಗೆ ತಿಳಿಸಿ, ವಿಚಾರಿಸಿದಾಗ ರಹಸ್ಯ ಬಯಲಾಯಿತು.
ಜಿಲ್ಲಾ ಕಾಂಗೈ ಸಮಿತಿ ರಚನೆಗೆ ಕಸರತ್ತು
ನವದೆಹಲಿ, ನ. 15– ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ನಾಯ್ಕರ್ ಅವರು ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಪುನರ್ರಚನೆ ಪಟ್ಟಿಯನ್ನು ಎಐಸಿಸಿ ಒಪ್ಪಿಗೆಗಾಗಿ ಸಲ್ಲಿಸಿದ್ದು ಅದರ ಬಗೆಗೆ ದೆಹಲಿಯಲ್ಲೀಗ ಲಾಬಿ ಪ್ರಾರಂಭವಾಗಿದೆ.