ನವದೆಹಲಿ, ಜೂನ್ 15– ರಾಜಕೀಯ ಮುತ್ಸದ್ಧಿ ಎಂದು ಕರೆಸಿಕೊಳ್ಳುವ ಪ್ರಧಾನಿ ಪಿ.ವಿ. ನರಸಿಂಹರಾವ್ ಈಗ ಮುಗ್ಗರಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸಂಸತ್ತಿನ ಉಭಯ ಸದನಗಳಲ್ಲೂ 2/3 ರಷ್ಟು ಬಹುಮತವಿಲ್ಲದಿದ್ದರೂ, ಚುನಾವಣೆ ಸುಧಾರಣೆ ಹೆಸರಿನಲ್ಲಿ ಸಂವಿಧಾನದ 83ನೇ ತಿದ್ದುಪಡಿಯಂತಹ ಮಹತ್ವದ ವಿಷಯಕ್ಕೆ ಕೈಹಾಕಿ ತಿದ್ದುಪಡಿ ಮಸೂದೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಾಗಿ ಬಂದ ಪರಿಸ್ಥಿತಿಯಿಂದ ಸಂಸತ್ತಿನ ಒಳಗೆ ಮಾತ್ರವಲ್ಲ ಹೊರಗೂ ನಗೆಪಾಟಲಿಗೆ ಗುರಿಯಾಗಬೇಕಾದ ಸ್ಥಿತಿ ಬಂದದ್ದು ಅವರ ರಾಜಕೀಯ ಜೀವನದಲ್ಲಿ ಒಂದು ಹಿನ್ನಡೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.