ನವದೆಹಲಿ, ಏ. 28– ಜನ ಬಳಕೆಯ ಹತ್ತು ವಸ್ತುಗಳನ್ನು ಕಾಲಕ್ರಮದಲ್ಲಿ ಸಾರ್ವಜನಿಕ ವಿತರಣೆ ವ್ಯವಸ್ಥೆಗೆ ಸರ್ಕಾರ ಒಳಪಡಿಸಬೇಕೆಂದು ಅಗತ್ಯ ವಸ್ತುಗಳನ್ನು ಕುರಿತ ದಾರಿಯಾ ಸಮಿತಿ ಶಿಫಾರಸು ಮಾಡಿದೆ.
ಒರಟುಧಾನ್ಯ, ಬೆಳೆಗಳು, ಸಕ್ಕರೆ, ವನಸ್ಪತಿ ಮತ್ತು ಸಂಸ್ಕರಿತ ಖಾದ್ಯತೈಲಗಳು, ಹಾಲು, ಸಾಮಾನ್ಯ ಬಟ್ಟೆ, ಪಾದರಕ್ಷೆಗಳು, ಸೀಮೆಎಣ್ಣೆ ಮತ್ತು ಮನೆಬಳಕೆಯ ಇಂಧನಗಳು, ಸಾಮಾನ್ಯ ಸಾಬೂನು ಇತ್ಯಾದಿ ವಸ್ತುಗಳು ಮತ್ತು ಶಾಲಾ ಪಠ್ಯಪುಸ್ತಕಗಳು – ಇವು ಸಮಿತಿ ಶಿಫಾರಸು ಮಾಡಿರುವ ವಸ್ತುಗಳು.
ಮಾರುಕಟ್ಟೆಯ ಪ್ರಭಾವಕ್ಕೆ ಶ್ರೀಸಾಮಾನ್ಯನ ಹಣೆಬರಹವನ್ನು ಹಾಗೂ ಅಭಿವೃದ್ಧಿ ಕ್ರಮಗಳನ್ನು ಗುರಿ ಮಾಡಬಾರದೆಂಬ ನಿರ್ಣಯಕ್ಕೆ ಬಂದಿರುವ ಸಮಿತಿಯು ಜನ ಬಳಕೆಯ ಹತ್ತು ವಸ್ತುಗಳನ್ನು ಸಾರ್ವಜನಿಕ ವಿತರಣೆ ವ್ಯವಸ್ಥೆಗೆ ಸರ್ಕಾರ ಒಳಪಡಿಸಬೇಕು ಎಂದು ಶಿಫಾರಸು ಮಾಡಿದೆ.
ಆರ್ಥಿಕ ಪರಿಸ್ಥಿತಿಯ ಕೂಲಂಕಷ ವಿಮರ್ಶೆಗೆ 12 ಮಂದಿಯ ಸಮಿತಿ
ನವದೆಹಲಿ, ಏ. 28– ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ದೇಶದಲ್ಲಿನ ‘ಉತ್ಕಟ ಆರ್ಥಿಕ ಪರಿಸ್ಥಿತಿಯ’ ಬಗ್ಗೆ ತನ್ನ ತೀವ್ರ ಕಳವಳ ವ್ಯಕ್ತಪಡಿಸಿ, ‘ನಮ್ಮ ಕೆಲವು ನೀತಿಗಳು ಅಸಮರ್ಪಕವಾಗಿದ್ದು, ಅವುಗಳ ಅನುಷ್ಠಾನದಲ್ಲಿ ದೋಷಗಳು ಕಂಡುಬಂದಿವೆ’ ಎಂದು ಇಂದು ಒಪ್ಪಿಕೊಂಡಿತು.
ಕೃಷಿ ಉತ್ಪಾದನೆಯಲ್ಲಿ ಗಮನಾರ್ಹ ಚೇತರಿಕೆ ಕಂಡುಬಂದಿದ್ದರೂ, ಹಣದುಬ್ಬರದ ಒತ್ತಡಗಳನ್ನು ತಡೆಯಲು ಸಾಧ್ಯವಾಗಿಲ್ಲ ಎಂದು ಕಾರ್ಯಕಾರಿ ಸಮಿತಿಯು ರಾಜಕೀಯ ಪರಿಸ್ಥಿತಿ ಕುರಿತು ತನ್ನ ಆರು ಪುಟಗಳ ನಿರ್ಣಯದಲ್ಲಿ ಅಂಗೀಕರಿಸಿದೆ.