25 ವರ್ಷಗಳ ಹಿಂದೆ: ಶನಿವಾರ ನವೆಂಬರ್ 9, 1996

ಚಂಡಮಾರುತಕ್ಕೆ 1000 ಬಲಿ
ಹೈದರಾಬಾದ್, ನ. 8 (ಪಿಟಿಐ)– ಆಂಧ್ರಪ್ರದೇಶದ ಕರಾವಳಿ ಪ್ರದೇಶದಲ್ಲಿ ಬೀಸಿದ ಭೀಕರ ಚಂಡಮಾರುತದಲ್ಲಿ ಮೃತಪಟ್ಟವರ ಸಂಖ್ಯೆ ಒಂದು ಸಾವಿರಕ್ಕೂ ಹೆಚ್ಚಿರುವ ಸಾಧ್ಯತೆಗಳಿದ್ದು, ಕನಿಷ್ಠ ಎರಡು ಸಾವಿರ ಕೋಟಿ ರೂಪಾಯಿಗಳ ನಷ್ಟ ಸಂಭವಿಸಬಹುದು ಎಂದು ಹಾನಿಗೀಡಾದ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಇಂದು ಇಲ್ಲಿ ಪ್ರಕಟಿಸಿದರು.
1977ರಲ್ಲಿ ಸುಮಾರು ಹತ್ತು ಸಾವಿರ ಜನರನ್ನು ಬಲಿ ತೆಗೆದುಕೊಂಡಿದ್ದ ಚಂಡಮಾರುತ ಸಂದರ್ಭದಲ್ಲಿ ಸಂಭವಿಸಿದ ಹಾನಿಗಿಂತ ಈ ಬಾರಿ ಹೆಚ್ಚು ಹಾನಿ ಸಂಭವಿಸಿದೆ ಎಂದು ಅವರು ಹೇಳಿದರು. ಕೋನಸೀಮ ಪ್ರದೇಶವೊಂದರಲ್ಲೇ ಸುಮಾರು ಎಂಟು ಲಕ್ಷ ಹೆಕ್ಟೇರ್ಗಳಷ್ಟು ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬತ್ತದ ಪೈರು ನಾಶವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಜೆಎಂಎಂ: ರಾವ್ಗೆ ನಿರೀಕ್ಷಣಾ ಜಾಮೀನು
ನವದೆಹಲಿ, ನ. 8 (ಯುಎನ್ಐ, ಪಿಟಿಐ)– ಜೆಎಂಎಂ ಲಂಚ ಪ್ರಕರಣದಲ್ಲಿ ದೆಹಲಿ ಹೈಕೋರ್ಟಿನಿಂದ ಇಂದು ನಿರೀಕ್ಷಣಾ ಜಾಮೀನು ಪಡೆದಿರುವ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರಿಗೆ ಸೇಂಟ್ ಕಿಟ್ಸ್ ಫೋರ್ಜರಿ ಪ್ರಕರಣದಲ್ಲೂ ತಾತ್ಕಾಲಿಕ ಜಾಮೀನು ಸಿಕ್ಕಿದೆ.
ನ್ಯಾಯಾಲಯವು ಒಂದು ವೇಳೆ ಆರೋಪಿಯನ್ನು ಬಂಧಿಸಲು ಸೂಚಿಸಿದರೆ ಅಥವಾ ಪೊಲೀಸರು ಬಂಧಿಸಿದರೆ ರಾವ್ ಅವರನ್ನು ಒಂದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೌಲ್ಯದ ಜಾಮೀನು ಮೇಲೆ ಬಿಡುಗಡೆ ಮಾಡಬೇಕು ಎಂದು ವಿಭಾಗೀಯ ಪೀಠ ಸೂಚಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.