ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿಯ ಹಲವು ಗ್ರಾಮಗಳು ಈಗ ಆತಂಕ, ಭಯದಲ್ಲಿ ತಲ್ಲಣಿಸುತ್ತಿವೆ. ಕಾರಣ ಬದುಕನ್ನು ಬರಡಾಗಿಸುವ ಎತ್ತಿನಹೊಳೆ ಯೋಜನೆ. ಇದುವರೆಗಿನ ಬಹುತೇಕ ಯೋಜನೆಗಳು ಭೂಮಿ ನೀಡಿದ ರೈತರ ಬದುಕಿಗೆ ಬೆಂಕಿ ಇಟ್ಟವುಗಳೇ. ಶರಾವತಿ ಯೋಜನೆಯಲ್ಲಿ ಜಮೀನು ಕಳೆದುಕೊಂಡ ಅನೇಕ ರೈತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಇದೇ ದುಃಸ್ಥಿತಿ ಹಾಸನ ಜಿಲ್ಲೆ, ಅರಸೀಕೆರೆ ಭಾಗದ ರೈತರಿಗೂ ಕಾಡುತ್ತಿದೆ. ಒಂದು ಭಾಗದ ಜನರಿಗೆ ನೀರುಣಿಸಲು ಇನ್ನೊಂದು ಭಾಗದ ಜನರ ಜೀವನವನ್ನೇ ಆಪೋಷನ ತೆಗೆದುಕೊಳ್ಳುವ ಈ ಯೋಜನೆಯ ಫಲಾನುಭವಿಗಳು ಮಾತ್ರ ರಾಜಕಾರಣಿಗಳು ಮತ್ತು ಗುತ್ತಿಗೆದಾರರು. ಅಮಾಯಕ ರೈತರನ್ನು ಏಮಾರಿಸಿ ಅವರ ಜಮೀನಿನ ಪತ್ರ ಪಡೆದುಕೊಂಡು ಕೈಗೊಂದಿಷ್ಟು ಪುಡಿಗಾಸು ಕೊಟ್ಟು ಭರದಿಂದ ಕಾಮಗಾರಿ ನಡೆಸುತ್ತಿದ್ದಾರೆ. ಇದೀಗ ಈ ಕಾಲುವೆ ಎಂಬ ಪೆಡಂಭೂತ ಮುದುಡಿ ಎಂಬ ಹಳ್ಳಿಯವರೆಗೂ ಬಂದಿದೆ.