ಕಾನೂನಿನಲ್ಲಿ ಹೇಳಿರುವ ಕಾಮಗಾರಿಗಳಲ್ಲಿ ನಡೆಪ್ ಮಾದರಿಯ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಮತ್ತು ಜೀವಾಮೃತ ತಯಾರಿಕೆ ಕೂಡ ಒಂದು. ‘ಊರ ತುಂಬ ಬೆಳೆದಿರುವ ಕಸವನ್ನು ನಡೆಪ್ ಮಾದರಿಯಲ್ಲಿ ಗೊಬ್ಬರ ತಯಾರಿಸುತ್ತೇವೆ, ಕೆಲಸ ಕೊಡಿ’ ಎಂದು ಕೂಲಿಕಾರರು ಕೇಳುತ್ತಿದ್ದಾರೆ. ಆದರೆ ಆಡಳಿತ ಯಂತ್ರ ಮನಸ್ಸು ಮಾಡುತ್ತಿಲ್ಲ. ಅದರ ಅಳತೆ ಏನಾಗಬೇಕು, ಎಷ್ಟು ಸಂಪನ್ಮೂಲ ಸೃಷ್ಟಿಯಾಗುತ್ತದೆ ಎಂಬೆಲ್ಲ ಗೊಂದಲಗಳು ಆಡಳಿತಕ್ಕೆ ಇರುವಂತಿದೆ. ಕಾನೂನಿನಲ್ಲಿ ಈ ವಿಷಯ ಹಾಕುವಾಗ ಲೆಕ್ಕ ಹಾಕಿ,
ವಿಚಾರ ಮಾಡಿಯೇ ಹಾಕಲಾಗುತ್ತದೆಯಲ್ಲವೇ? ಹಾಗಿದ್ದೂ ಪರಿಸರಕ್ಕೆ ಪೂರಕವಾದ, ಸ್ವಚ್ಛ ಭಾರತ ಯೋಜನೆಗೆ ನೆರವಾಗಬಲ್ಲ, ಪ್ರತಿವರ್ಷವೂ ಕೆಲಸ ಕೊಡಬಲ್ಲ ಈ ಕಾಮಗಾರಿಗೆ ಹಿಂಜರಿಕೆ ಏಕೆ? ಪಂಚಾಯತ್ ರಾಜ್ ಇಲಾಖೆ ಈ ಕುರಿತು ಚರ್ಚೆ ಮಾಡಬೇಕು ಮತ್ತು ಎಲ್ಲೆಲ್ಲಿ ಹಸಿರು ಕಳೆಗಳಿವೆಯೋ ಅಲ್ಲೆಲ್ಲ ಕಾಂಪೋಸ್ಟ್ ತಯಾರಿಕೆಯ ಕೆಲಸ ಕೊಡುವಂತೆ ಆದೇಶ ಹೊರಡಿಸಬೇಕು.