ಭಾರತದ ಸಂವಿಧಾನವು ಜಾತ್ಯತೀತತೆಯನ್ನು ಪ್ರತಿಪಾದಿಸುತ್ತದೆ. ಇದರ ಅರ್ಥವನ್ನು ಸರಳವಾಗಿ ಹೇಳುವುದಾದರೆ, ‘ಪ್ರಭುತ್ವಕ್ಕೆ ಧರ್ಮವಿಲ್ಲ’. ಪ್ರಜೆಗಳು ಯಾವುದೇ ಧರ್ಮವನ್ನಾದರೂ ಅನ್ಯರಿಗೆ ತೊಂದರೆ ಆಗದಂತೆ ಅನುಸರಿಸಿ ಪಾಲಿಸಿಕೊಂಡು ಹೋಗಬಹುದು. ದೇಶದ ಪ್ರಧಾನಿಯು ಪ್ರಭುತ್ವದ ಪ್ರತಿನಿಧಿ. ಹಾಗೆಂದ ಮೇಲೆ ನಮ್ಮ ಸಂವಿಧಾನದ ಆಶಯದ ಆಧಾರದ ಮೇಲೆ ಪ್ರಧಾನಿ ಇಂಥ ಯಾವುದೇ ‘ಧಾರ್ಮಿಕ’ ಕಾರ್ಯಕ್ರಮಕ್ಕೆ ‘ಪ್ರಧಾನ’ವಾಗಿ ಹೋಗುವಂತಿಲ್ಲ. ಅತಿಥಿ ಆಗುವುದು ಬೇರೆ, ಅಧ್ವರ್ಯು ಆಗುವುದು ಬೇರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅತಿಥಿ ಆಗಿರಲಿಲ್ಲ. ಇಡೀ ಕಾರ್ಯಕ್ರಮವು ಪ್ರಭುತ್ವದ ಕಾರ್ಯಕ್ರಮವೆಂಬಂತೆ ಬಿಂಬಿತವಾಯಿತು. ಅಂದರೆ, ಪ್ರಧಾನಿಯವರು ರಾಮಮಂದಿರಕ್ಕೆ ಸ್ವತಃ ಭೂಮಿಪೂಜೆಯನ್ನು ನೆರವೇರಿಸಿದ್ದು, ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಯಾಕೆಂದರೆ, ಇದು ಒಂದು ಖಾಸಗಿ ಟ್ರಸ್ಟ್ನ ಕಾರ್ಯಕ್ರಮ. ಹಾಗಿದ್ದರೆ ಮೋದಿಯವರು ‘ಅನ್ಯ’ ಧರ್ಮೀಯರ ಇಂತಹ ಕಾರ್ಯಕ್ರಮಗಳನ್ನೂ ನೆರವೇರಿಸುವರೇ? ನಮ್ಮ ಪ್ರಭುತ್ವವು ಬಹುಮತದ ಬಲದ ಮೇಲಿದೆ. ಈಗ ಬಹುಮತದ ‘ಬಲ’ವಿದೆ. ಅಂದಮೇಲೆ ಏನು ಮಾಡಿದರೂ ನಡೆಯುತ್ತದೆ ಎಂದು ತಿಳಿಯಬೇಕೇ?