ನಗರದ ಬಹುತೇಕ ವಾರ್ಡ್ಗಳಲ್ಲಿ ಟಾರು ಹಾಕಿದ ಮರುದಿನವೇ ಕಿತ್ತುಹೋಗುವ ರಸ್ತೆಗಳು, ಒಂದು ವರ್ಷವೂ ಬಾಳಿಕೆ ಬರದಂತೆ ನಿರ್ಮಾಣ ಮಾಡಿರುವ ಫುಟ್ಪಾತ್ಗಳು, ಹೂಳು ತುಂಬಿರುವ ಚರಂಡಿಗಳು, ಕಂಡ ಕಂಡಲ್ಲೆಲ್ಲ ಕೊಳೆ-ಕೊಚ್ಚೆ ಮತ್ತು ಎರ್ರಾಬಿರ್ರಿ ಮಾಡಿದ ಕಾಮಗಾರಿಗಳ ತ್ಯಾಜ್ಯಗಳು, ದೂಳುಮಯ ವಾತಾವರಣ ಮತ್ತು ನೋಡಿದಲ್ಲೆಲ್ಲ ಅವ್ಯವಸ್ಥೆ. ಜನರಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಸರಿಪಡಿಸುವ ಇರಾದೆ ಮತ್ತು ಸಂಪನ್ಮೂಲವು ಮಹಾನಗರ ಪಾಲಿಕೆ ಬಳಿ ಇಲ್ಲದಿದ್ದರೂ ಪುತ್ಥಳಿಗಳ ಸ್ಥಾಪನೆಗೆ, ಉದ್ಯಾನಗಳ ನಿರ್ಮಾಣಕ್ಕೆ, ಕೃತಕ ಜಲಪಾತಗಳ ಸೃಷ್ಟಿಗೆ, ಗೋಪುರಗಳ ಸ್ಥಾಪನೆಗೆ ಮತ್ತು ರಸ್ತೆಗಳ ಪುನರ್ ನಾಮಕರಣಕ್ಕೆ ವಿಶೇಷ ಆಸಕ್ತಿ ಮತ್ತು ಹಣ ಇರುತ್ತದೆ! ಇದನ್ನು ನೋಡಿದರೆ ‘ಹೇಳುವವರು ಕೇಳುವವರು ಯಾರೂ ಇಲ್ಲವೇ?’ ಎಂಬ ಉಕ್ತಿಗೆ ಬೆಂಗಳೂರು ನಗರ ಪ್ರಶಸ್ತ ಸ್ಥಳ ಎಂಬಂತೆ ಕಂಡುಬರುತ್ತದೆ!