ದೇಶಕ್ಕೆ ಹೇಗೆ ಮುಂಬೈ ವಾಣಿಜ್ಯ ರಾಜಧಾನಿಯೋ ಹಾಗೇ ಡಿಯರ್ ಬೆಂಗಳೂರು, ಕರ್ನಾಟಕಕ್ಕೆ ನೀನೇ ವಾಣಿಜ್ಯ, ಆರ್ಥಿಕ ಹಾಗೂ ನಿಜದ ಅರ್ಥದಲ್ಲೂ ರಾಜಧಾನಿ. ಕೊರೊನಾ ನಿನ್ನನ್ನು ಕಾಡುತ್ತಿದೆ. ದೇಶದ ಉದ್ದಗಲದಿಂದ ದುಡಿಮೆ ಕೇಳಿ ಬಂದ ಕೈಗಳಿಗೆ ಕೆಲಸ ಕೊಡುವ ಧಣಿ ನೀನು. ಹಸಿದ ಹೊಟ್ಟೆಗೆ ಅನ್ನ ನೀಡುವ ಅನ್ನಪೂರ್ಣೇಶ್ವರಿ ನೀನು. ದಿಟ್ಟ ಹೃದಯ ನಿನ್ನದು. ಏಳು ಎದ್ದೇಳು, ಧೈರ್ಯವಾಗಿ ಹೋರಾಡು. ನೀನು ಸೋಲಬಾರದು. ನೀನು ಸೋತರೆ ನಾವೆಲ್ಲ ಸೋತಂತೆ. ಈಗ ಕೊರೊನಾ ಸೋಂಕು ಉತ್ತುಂಗಕ್ಕೇರಿರಬಹುದು. ಆದರೆ ಮೇಲೇರಿದ್ದು ಕೆಳಗಿಳಿಯಲೇಬೇಕು. ಇದು ಪ್ರಕೃತಿಯ ನಿಯಮ. ಇನ್ನೊಂದೆರಡು ತಿಂಗಳು ಹೋರಾಡಿ ಜಯಶಾಲಿಯಾಗು. ನಿನ್ನ ಗೆಲುವು ನಿಶ್ಚಿತ. ನಿನ್ನ ವೈಭವ ಮರುಕಳಿಸಲು ಕಾತರದಿಂದ ಕಾಯುತ್ತಿದ್ದಾರೆ ನಿನ್ನ ಅಭಿಮಾನಿಗಳು.