ಹಿಂದೆ ಕಾಂಗ್ರೆಸ್ ಪಕ್ಷದ ಚಿಹ್ನೆ ಮೇಲೆ ನಿಂತ ಯಾರಾದರೂ ಗೆಲ್ಲುತ್ತಿದ್ದರು. ಈಗ ಬಿಜೆಪಿಯಲ್ಲಿ ಅದೇ ಸ್ಥಿತಿ ಇದ್ದಂತಿದೆ. ಕೆಲವು ಅಭ್ಯರ್ಥಿಗಳ ವಿಚಾರದಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗದಂತಹ ಆಪಾದನೆಗಳಿದ್ದರೂ ಇವೆಲ್ಲ ಮತದಾರರಿಗೆ ತಿಳಿದಿದ್ದರೂ ಚುನಾವಣೆಯಲ್ಲಿ ಅವೆಲ್ಲ ನಗಣ್ಯವಾಗುತ್ತಿವೆ. ಪಕ್ಷವನ್ನು, ನಾಯಕತ್ವವನ್ನು ಬೆಳೆಸುವುದಕ್ಕೆ, ಪಕ್ಷದಲ್ಲಿ ಮೌಲ್ಯಾಧಾರಿತ ಆಶಯಗಳನ್ನು ಬೆಳೆಸುವುದಕ್ಕೆ ಕಾಂಗ್ರೆಸ್ ನಾಯಕರು ಪ್ರಾಮುಖ್ಯ ಕೊಟ್ಟಿಲ್ಲ. ವ್ಯಕ್ತಿಯ ವರ್ಚಸ್ಸನ್ನು ಗಣನೆಗೆ ತೆಗೆದುಕೊಳ್ಳದೆ ಕೆಲವರನ್ನು ನೇಪಥ್ಯಕ್ಕೆ ಸರಿಸಲಾಗಿದೆ. ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್, ಬಿಹಾರದಲ್ಲಿ ತೇಜಸ್ವಿ ಯಾದವ್ ಅವರು ಜನರ ಆಶೋತ್ತರಗಳಿಗೆ ಸ್ಪಂದಿಸಿ, ಮೆಚ್ಚುಗೆಗೆ ಪಾತ್ರರಾದರು. ಕ್ಷೇತ್ರಗಳಲ್ಲಿ ಜನರ ದಿನನಿತ್ಯದ ಸಮಸ್ಯೆಗಳಿಗೆ ಸ್ಪಂದಿಸದೆ, ಚುನಾವಣೆ ಬಂದಾಗ ಮಾತ್ರ ಎಚ್ಚೆತ್ತುಕೊಂಡರೆ ಗೆಲ್ಲಲು ಸಾಧ್ಯವೇ?