ಬಿಹಾರದಲ್ಲಿ ನಡೆದಿರುವ ರಾಜಕೀಯ ಮೇಲಾಟವನ್ನು ನೋಡಿದಾಗ, ಇಂತಹ ಬೆಳವಣಿಗೆಗಳು ಪ್ರಜಾಪ್ರಭುತ್ವದ ಅಣಕವಲ್ಲದೆ ಮತ್ತೇನೂ ಅಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಅಧಿಕಾರ ಹಿಡಿಯಲು ಸಂಖ್ಯೆಯೊಂದು ಮಾನದಂಡವೇ ಅಲ್ಲ ಎಂಬಂತಾಗಿದೆ. ದೊಡ್ಡ ಪಕ್ಷಗಳು ಮತ್ತೊಂದು ಪಕ್ಷವನ್ನು ಅಧಿಕಾರದಿಂದ ದೂರ ಇಡಲು ಕಡಿಮೆ ಶಾಸಕರನ್ನು ಹೊಂದಿರುವ ಪಕ್ಷಕ್ಕೆ ಅವಮಾನ ನುಂಗಿ ಬೆಂಬಲ ನೀಡುತ್ತಿರುವುದು ವಿಪರ್ಯಾಸದ ಸಂಗತಿ. ಮತ ನೀಡಿದ ಮಹನೀಯರು ಬೆಪ್ಪಾಗಿ, ರಾಜಕೀಯ ಅಟಾಟೋಪಗಳನ್ನು ನೋಡುತ್ತಾ ಕುಳಿತುಕೊಳ್ಳಬೇಕಾದ ಪರಿಸ್ಥಿತಿ.