ಕೋವಿಡ್ ಕಾರಣದಿಂದ ಶಾಲಾ ಶುಲ್ಕ ಪಾವತಿಸಲು ಸಾಧ್ಯವಾಗದ 106 ಬಡ ವಿದ್ಯಾರ್ಥಿಗಳ ಶುಲ್ಕವನ್ನು ಬೆಂಗಳೂರಿನಲ್ಲಿ ಓದುತ್ತಿರುವ ನೀಲ್ ಪ್ರಕಾಶ್ ಎಂಬ ಪಿಯು ವಿದ್ಯಾರ್ಥಿಯು ತನ್ನ ಸ್ನೇಹಿತರು ಹಾಗೂ ಹಿತೈಷಿಗಳಿಂದ ಸಂಗ್ರಹಿಸಿ ಪಾವತಿಸಿರುವ ಸುದ್ದಿಯನ್ನು (ಪ್ರ.ವಾ., ಜ. 13) ಓದಿ ಅಚ್ಚರಿ ಹಾಗೂ ಸಂತೋಷವಾಯಿತು. ಈ ರೀತಿ ಬಡವರ ಸಮಸ್ಯೆಯನ್ನು ಅರ್ಥಮಾಡಿಕೊಂಡು, ತನಗೆ ತಿಳಿದವರಿಂದ ಆರ್ಥಿಕ ಸಹಾಯ ಮಾಡಿಸಿದ ಈ ಬಾಲಕನ ಕಾರ್ಯ ಅತಿಶಯವಾದುದು. ಇಂತಹ ಮಕ್ಕಳೇ ಮುಂದಿನ ಸತ್ಪ್ರಜೆಗಳು. ಪ್ರತಿಯೊಬ್ಬ ಪ್ರಜೆಯೂ ಇದೇ ರೀತಿ ಬಡವರಿಗೆ ಸಹಾಯಹಸ್ತ ಚಾಚಿದರೆ, ಬಡತನ ನಿರ್ಮೂಲವಾಗಿ ನಮ್ಮದು ರಾಮರಾಜ್ಯವಾಗುವುದರಲ್ಲಿ ಸಂದೇಹವೇ ಇರದು. ಎಲ್ಲರಲ್ಲೂ ಇಂತಹ ಮನಃಸ್ಥಿತಿ ವಿಕಸನಗೊಳ್ಳಲಿ.