ನಮ್ಮ ಸಂವಿಧಾನ, ರಾಷ್ಟ್ರ, ನಮ್ಮ ಯಾವೊಬ್ಬ ನಾಗರಿಕರೂ ರಾಷ್ಟ್ರೀಯ ಭದ್ರತೆಯ ಜೊತೆ ರಾಜಿ ಆಗಬೇಕು ಎನ್ನುವುದಿಲ್ಲ. ನಮಗೆಲ್ಲರಿಗೂ ರಾಷ್ಟ್ರದ ಭದ್ರತೆ ಮೊದಲ ಆದ್ಯತೆ. ಬೇರೆ ಬೇರೆ ದೇಶಗಳಿಂದ ಬರುವ ‘ಅಕ್ರಮ ನುಸುಳುಕೋರ’ರಿಂದ ಭದ್ರತೆಗೆ ಧಕ್ಕೆ ಆಗುತ್ತದೆ ಎಂದಾದರೆ, ಅದನ್ನು ತಡೆಯಲು ಈಗಾಗಲೇ ಸಾಕಷ್ಟು ಕಠಿಣ ಕಾನೂನುಗಳು ಇವೆ. ರಾಷ್ಟ್ರೀಯ ಭದ್ರತಾ ಕಾನೂನು ಅಂತಹುದರಲ್ಲಿ ಒಂದು. ಆದರೆ ಪೌರತ್ವ (ತಿದ್ದುಪಡಿ) ಕಾಯ್ದೆಯ ಹಿಂದಿರುವ ವಿರೋಧಕ್ಕೆ ಕಾರಣ, ಆ ಕಾನೂನನ್ನು ಪ್ರಸ್ತಾಪಿಸಿದವರ ಮನಃಸ್ಥಿತಿ ಕುರಿತಾದುದು. ಭಾರತವನ್ನು ಒಡೆದು, ಬಹುಸಂಖ್ಯಾತರ ಭಾವನೆಗಳನ್ನು ಬಡಿದೆಬ್ಬಿಸಿ ತಾವು ಬೇಳೆ ಬೇಯಿಸಿಕೊಳ್ಳುವ ಹುನ್ನಾರದ ಬಗೆಗಿನದು!
ಇಂದು ಆ ಮನಸ್ಸುಗಳಿಗೆ ಆಯುಧವಾಗಿರುವುದು ಮುಸ್ಲಿಂ ಸಮುದಾಯ. ಒಂದು ಸಲ ಇದು ಮುಗಿದ ಮೇಲೆ, ಮುಂದೆ ಒಡೆಯಲು ಸಿಗುವುದು ಇನ್ನೇನೋ- ಉತ್ತರ , ದಕ್ಷಿಣ ಭಾರತಗಳನ್ನೂ ಒಡೆಯುವುದು ಆಗಿರಬಹುದು. ಹಿಂದಿ ಭಾಷಿಕ, ಹಿಂದಿ ಅಲ್ಲದ ಭಾಷಿಕ ಪ್ರಾಂತಗಳ ಸಮುದಾಯಗಳೂ ಆಗಿರಬಹುದು. ಜಾತಿ ಜಾತಿಗಳೂ ಆಗಿರಬಹುದು ಅಥವಾ ಇನ್ನೇನೋ...?