ಮೈಸೂರು ಜಿಲ್ಲೆಗೆ ಒಳಪಡುವ 52 ನ್ಯಾಯಾಲಯಗಳಲ್ಲಿ ಇತ್ತೀಚೆಗೆ ಲೋಕ ಅದಾಲತ್ ಮೂಲಕ ಜಾಮೀನುರಹಿತ ಕ್ರಿಮಿನಲ್ ಕೇಸುಗಳನ್ನು ಹೊರತುಪಡಿಸಿ, ಒಟ್ಟಾರೆ ದಾಖಲಾದ 24,951 ಪ್ರಕರಣಗಳ ಪೈಕಿ, 14,237 ಪ್ರಕರಣಗಳನ್ನು ಒಂದೇ ದಿನ ಇತ್ಯರ್ಥಪಡಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ 29 ಜೋಡಿಗಳು ತಮ್ಮ ಸಮಸ್ಯೆಗಳನ್ನು ಸೌಹಾರ್ದದಿಂದ ಬಗೆಹರಿಸಿಕೊಂಡು ಮತ್ತೆ ಒಂದಾಗಿರುವುದು ಮೆಚ್ಚತಕ್ಕ ಸಂಗತಿ. ವರ್ಷಾನುಗಟ್ಟಲೆ ಇತ್ಯರ್ಥಗೊಳ್ಳದ ಪ್ರಕರಣಗಳಿಗೆ ಲೋಕ ಅದಾಲತ್ ಸಂಜೀವಿನಿ ಸ್ವರೂಪದ್ದಾಗಿದೆ. ಮುಖ್ಯವಾಗಿ ಇದು ಕಕ್ಷಿದಾರಸ್ನೇಹಿಯಾಗಿದೆ.