ಕೋವಿಡ್ ಸಂದರ್ಭದಲ್ಲಿ ಎಲ್ಲ ಉದ್ಯಮದವರೂ ನಷ್ಟವನ್ನು ಅನುಭವಿಸಿದ್ದಾರೆ, ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಟಾಕಿ ಮಾರಾಟಗಾರರು ಸರ್ಕಾರದ ಮೇಲೆ ಒತ್ತಡ ಹೇರದೆ ಪರಿಸ್ಥಿತಿಯನ್ನು ಅರಿತು ನಡೆಯುವುದೊಳಿತು. ಸರ್ಕಾರ ಸಹ, ಹಸಿರು ಪಟಾಕಿ ಹೆಸರಿನಲ್ಲಿ ಅವರ ಬೇಡಿಕೆಯನ್ನು ಮನ್ನಿಸದಿರುವುದು ಲೇಸು. ಇಷ್ಟಕ್ಕೂ ಕೇವಲ ಹಸಿರು ಪಟಾಕಿಯೇ ಮಾರಾಟವಾಗುತ್ತದೆ, ಸಾರ್ವಜನಿಕರೂ ಅವನ್ನೇ ಸಿಡಿಸುತ್ತಾರೆ ಎಂಬುದಕ್ಕೆ ಖಾತರಿಯೇನು? ಹಬ್ಬದ ಸಂಭ್ರಮದಲ್ಲಿ ಅದನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲು ಮತ್ತು ಅಕ್ಷರಶಃ ಸೂಚನೆಗಳನ್ನು ಕಾರ್ಯಗತಗೊಳಿಸಲು ಪ್ರಾಯೋಗಿಕವಾಗಿ ಸಾಧ್ಯವೇ?