ಹೊಸ ರೂಪಾಂತರದ ಕೊರೊನಾ ಪಸರಿಸಬಹುದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರವು ರಾತ್ರಿ ಕರ್ಫ್ಯೂ ಜಾರಿ ಮಾಡಿತು. ಈ ನಡೆಯನ್ನು ಸಾಮಾನ್ಯ ಜನರು, ವಿರೋಧ ಪಕ್ಷಗಳು ಹಾಗೂ ಆಡಳಿತ ಪಕ್ಷದ ಕೆಲವರು ಕಟುವಾಗಿ ಟೀಕಿಸಿದರು. ಮಾಜಿ ಸಚಿವರೊಬ್ಬರು ‘ರಾತ್ರಿ ವೇಳೆ ಮಾತ್ರ ಎಚ್ಚರವಿರಲು ಕೊರೊನಾ ಏನು ಗೂಬೆನಾ’ ಎಂದರು. ಇವರೆಲ್ಲರ ಅಭಿಪ್ರಾಯ ಸರಿಯಿರಬಹುದು. ಸಾರ್ವಜನಿಕ ಅಭಿಪ್ರಾಯವನ್ನು ಮನ್ನಿಸಿ ತನ್ನ ನಿರ್ಧಾರವನ್ನು ಸರ್ಕಾರ ವಾಪಸ್ ಪಡೆಯಿತು. ಆದರೆ ಇದನ್ನು ಕೂಡ ಜನ ವಿರೋಧಿಸಿದರು. ಸರ್ಕಾರದ ಪ್ರತಿಯೊಂದು ನಿರ್ಧಾರದಲ್ಲೂ ಹೀಗೆ ತಪ್ಪುಗಳನ್ನು ಹುಡುಕುತ್ತಾ ಹೋದರೆ ಅದಕ್ಕೆ ಕೊನೆ ಮೊದಲು ಎಂಬುದೇ ಇರುವುದಿಲ್ಲ. ಟೀಕಿಸುವ ಸಲುವಾಗಿ ಟೀಕೆ ಎಂಬಂತಾಗದೆ, ಪ್ರಜ್ಞಾವಂತರಾಗಿ ವರ್ತಿಸಬೇಕಾದುದು ಜನಸಾಮಾನ್ಯರ ಕರ್ತವ್ಯ.