ಕನ್ನಡ ನಾಡು, ನುಡಿ, ಸಂಸ್ಕೃತಿಯ ಸಂವರ್ಧನೆಗಾಗಿ ಶ್ರಮಿಸುತ್ತಿರುವ ಬಿ.ಎಂ.ಶ್ರೀ. ಪ್ರತಿಷ್ಠಾನ, ಉದಯಭಾನು ಕಲಾಸಂಘ, ಕನ್ನಡ ಯುವಜನ ಸಂಘ ಮೊದಲಾದ ಅನೇಕ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಹಲವು ವರ್ಷಗಳಿಂದಲೂ ಉದಾರವಾದ ಧನಸಹಾಯ ನೀಡುತ್ತಿತ್ತು. ಈ ಹಿಂದಿನ ಸರ್ಕಾರ ಅದರಲ್ಲಿ ಅರ್ಧಕ್ಕರ್ಧ ಕಡಿತಗೊಳಿಸಿ, ಅಧಿಕಾರ ಕೊನೆಗೊಳ್ಳುವ ಮುನ್ನ ತೀರಾ ಕೊನೆಗೆ, ಅದೂ ತೀರಾ ಒತ್ತಾಯ ಮಾಡಿದ ಮೇಲೆ ಧನಸಹಾಯ ಬಿಡುಗಡೆ ಮಾಡಿತು. ಆದರೆ ಈಗ ಸುಮಾರು ಎರಡು ವರ್ಷಗಳಿಂದ ಇಂಥ ಧನಸಹಾಯ ಸರ್ಕಾರದ ಕಡೆಯಿಂದ ಬರುವುದು ನಿಂತೇ ಹೋಗಿದೆ.