ಆದರೆ, ನಿಜವಾಗಿಯೂ ಕೋವಿಡ್ ಉತ್ತುಂಗದ ಸ್ಥಿತಿಯಲ್ಲಿ ಇದ್ದಾಗ ಬೆಡ್ ಮತ್ತು ಆಮ್ಲಜನಕ ಸಿಗದೆ ಬಹಳಷ್ಟು ಜನರು ಮನೆಯಲ್ಲಿ, ಆಸ್ಪತ್ರೆಯ ಕಾರಿಡಾರ್ಗಳಲ್ಲಿ, ಆಂಬುಲೆನ್ಸ್ಗಳಲ್ಲಿ, ರಸ್ತೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಾವುಗಳು ಕೋವಿಡ್ನಿಂದ ಆದವು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಯಾಕೆಂದರೆ ಇವರೆಲ್ಲಾ ಕೋವಿಡ್ ಪರೀಕ್ಷೆ ಮಾಡುವ ಮೊದಲೇ ಅಥವಾ ಫಲಿತಾಂಶ ಬರುವ ಮೊದಲೇ ಹಾಗೂ ಫಲಿತಾಂಶ ನೆಗೆಟಿವ್ ಬಂದು, ಉಸಿರಾಟದ ತೊಂದರೆಯಿಂದ ಜೀವ ತೆತ್ತಿದ್ದಾರೆ. ಇಂತಹವರಿಗೆ ಈ ಪರಿಹಾರ ಸಿಗಲಾರದು. ಕೋವಿಡ್ನಿಂದ ಸತ್ತವರ ಅಧಿಕೃತ ಲೆಕ್ಕಕ್ಕಿಂತ ದುಪ್ಪಟ್ಟು ಜನ ಈ ಮಹಾಮಾರಿಯಿಂದ ಸತ್ತಿದ್ದಾರೆ. ಅಂತಹ ಎಲ್ಲಾ ಬಡ ಕುಟುಂಬಗಳಿಗೆ ಪರಿಹಾರ ಸಿಗಬೇಕು. ಈ ದಿಸೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕು. ಸರ್ಕಾರ ಈ ಕುರಿತು ಮತ್ತೊಮ್ಮೆ ಪರಾಮರ್ಶೆ ನಡೆಸಲಿ.