‘ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ’ ಎಂಬ ಅಭಿಯಾನ ಸರ್ಕಾರದಿಂದ ಆರಂಭವಾಗಿರುವುದು ಔಚಿತ್ಯಪೂರ್ಣ. ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳು ಹೆಚ್ಚು ಪ್ರಗತಿ ಸಾಧಿಸಿರುವುದು ಈ ಅಭಿಯಾನದ ಮಹತ್ವವನ್ನು ಶ್ರುತಪಡಿಸುತ್ತದೆ. ಹೆಚ್ಚಿನ ಶುಲ್ಕ ನೀಡಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದರೆ ಅವರು ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಹೆಚ್ಚು ಬುದ್ಧಿವಂತರಾಗಿ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಎಂಬ ದೊಡ್ಡ ಭ್ರಮೆಯಲ್ಲಿ ನಾವೆಲ್ಲ ಇದ್ದೇವೆ. ಈ ಭ್ರಮೆಯಿಂದ ಹೊರಬರದಿದ್ದರೆ ನಮ್ಮ ಮಕ್ಕಳ ಭವಿಷ್ಯ ಕತ್ತಲಲ್ಲಿ ಕಳೆದುಹೋಗುವ ಸಂಭವವಿದೆ. ಮಕ್ಕಳ ಶಿಕ್ಷಣ ಮಾಧ್ಯಮ ಮಾತೃಭಾಷೆ/ಪರಿಸರದ ಭಾಷೆ ಆಗಿರಬೇಕೆಂಬುದು ಜಗತ್ತಿನ ಎಲ್ಲ ಶಿಕ್ಷಣ ತಜ್ಞರು, ಭಾಷಾ ವಿಜ್ಞಾನಿಗಳು, ಮನೋವಿಜ್ಞಾನಿಗಳ ಅಭಿಮತ.