ಅಧಿಕಾರಕ್ಕಾಗಿ ಪಕ್ಷವನ್ನೇ ತ್ಯಜಿಸಲು ಹಿಂಜರಿಯದ, ರಾಜ್ಯದಲ್ಲಿ ನೆರೆ ಬಂದಾಗ ಹೊರ ರಾಜ್ಯಗಳ ರೆಸಾರ್ಟುಗಳಲ್ಲಿ ಪ್ರತ್ಯಕ್ಷರಾದ, ವಿಧಾನಸಭೆಯ ಅಧಿವೇಶನದ ವೇಳೆ ಚರ್ಚೆಯಲ್ಲಿ ಪಾಲ್ಗೊಳ್ಳುವ ಬದಲು ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ, ಚರ್ಚೆಯಲ್ಲಿ ಪಾಲ್ಗೊಂಡಾಗ ಅಸಭ್ಯ ಮಾತುಗಳಿಂದ ರಾಷ್ಟ್ರದೆಲ್ಲೆಡೆ ಖಂಡನೆಗೊಳಗಾದ, ಅಧಿವೇಶನ ನಡೆಯದ ವೇಳೆ ‘ಸಿ.ಡಿ’ಗಳನ್ನು ಸೃಷ್ಟಿಸಿ, ಮಾಧ್ಯಮಗಳು ಕೋವಿಡ್ ಸೇರಿದಂತೆ ರಾಜ್ಯದ ಎಲ್ಲ ಸಮಸ್ಯೆಗಳನ್ನು ಮರೆಯುವಂತೆ ಮಾಡಿದ ಕರ್ನಾಟಕದ ‘ಗಂಡು’ ರಾಜಕಾರಣಿಗಳು ರಾಜ್ಯದ ಮಾನವನ್ನು ಇನ್ನೂ ಕೆಳಕ್ಕೆ ತಳ್ಳಲು ಸಾಧ್ಯವಿಲ್ಲ ಎಂದುಕೊಳ್ಳುತ್ತಿರುವಾಗಲೇ ಈ ರಾಜಕಾರಣಿಗಳು ತಮ್ಮ ‘ಗಂಡಸುತನ’ದ ಬಗ್ಗೆ ಇದೆಲ್ಲದರ ನಡುವೆಯೂ ಹೆಮ್ಮೆಯುಳ್ಳವರಾಗಿ ಮತ್ತು ಅದನ್ನು ಪ್ರದರ್ಶಿಸಲು ಇನ್ನೂ ಉತ್ಸುಕರಾಗಿರುವುದನ್ನು ನೋಡಿದಾಗ, ಕರ್ನಾಟಕಕ್ಕೆ ಒದಗಲಿರುವ ಪರಿಸ್ಥಿತಿಯನ್ನು ನೆನೆದು ಕಳವಳವಾಗುತ್ತಿದೆ.