ಮಳೆಗಾಲದಲ್ಲಿ ಅಷ್ಟೋ ಇಷ್ಟೋ ಕೆರೆಗಳು ತುಂಬುತ್ತವೆ. ಈ ಸಮಯದಲ್ಲಿ ಸ್ಥಳೀಯರು ವಾಹನ ತೊಳೆಯಲು, ಜಾನುವಾರು ಮತ್ತು ಬಟ್ಟೆ ತೊಳೆಯಲು ಕೆರೆಗಳಿಗೆ ತೆರಳುತ್ತಾರೆ. ಇದರಿಂದ ಉತ್ಪತ್ತಿಯಾದ ಹೇರಳ ಪ್ರಮಾಣದ ಡಿಟರ್ಜೆಂಟ್ ಮತ್ತು ಕೆರೆಯ ಏರಿಗೆ ಹೊಂದಿಕೊಂಡ ಹೊಲಗಳಲ್ಲಿ ರೈತರು ಬಳಸುವ ರಾಸಾಯನಿಕ ಗೊಬ್ಬರಗಳು ನೀರಿನಲ್ಲಿ ಶೀಘ್ರವಾಗಿ ಕರಗಿ, ಅಲ್ಲಿನ ಕಳೆಗಿಡಗಳು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತವೆ. ಈ ಕಳೆಗಿಡಗಳು ಕಡಿಮೆ ಅವಧಿಯಲ್ಲಿ ಪ್ರಚಂಡವಾಗಿ ಬೆಳೆದು ಇಡೀ ಕೆರೆಯನ್ನು ಆವರಿಸಿಕೊಳ್ಳುತ್ತವೆ. ಇನ್ನು ಬೇಸಿಗೆಯಲ್ಲಿ ಕೆರೆಗಳ ಒಡಲನ್ನು ಮರಳು ಗಣಿಗಾರಿಕೆ ಬಗೆಯುತ್ತದೆ. ಇದರಿಂದ ನೀರನ್ನು ಹಿಡಿದಿಟ್ಟುಕೊಳ್ಳುವ ಕೆರೆಗಳ ಸಾಮರ್ಥ್ಯ ಕುಗ್ಗುತ್ತದೆ. ಒಟ್ಟಿನಲ್ಲಿ ಯಾರಿಗೂ ಕೆರೆಗಳ ಬಗ್ಗೆ ಕಾಳಜಿಯಿಲ್ಲ, ಅವು ನಮ್ಮ ಜೀವನಾಡಿಗಳು ಎಂಬ ಪರಿಕಲ್ಪನೆ ಇಲ್ಲ. ಹಬ್ಬ ಹರಿದಿನಗಳಲ್ಲಿ ಕೆರೆಗಳಿಗೆ ಪೂಜೆ ಮಾಡಿದರೆ, ತುಂಬಿದಾಗ ಬಾಗಿನ ಅರ್ಪಿಸಿದರಷ್ಟೇ ಸಾಲದು. ಅವುಗಳ ಕುರಿತು ವೈಜ್ಞಾನಿಕ ಕಾಳಜಿಯೂ ಇರಬೇಕು. ಕೆರೆಗಳ ಏರಿಯ ಮೇಲೆ ಸ್ವಚ್ಛತೆ ಕಾಪಾಡುವುದು, ಕಳೆ-ಮುಳ್ಳುಗಿಡಗಳನ್ನು ತೆಗೆಸುವುದು, ಅಕ್ರಮ ಮರಳು ಗಣಿಗಾರಿಕೆ ತಡೆಯುವಂತಹ ಕ್ರಮಗಳಿಗೆ ಮುಂದಾದರೆ ಕೆರೆಗಳನ್ನು ಆರೋಗ್ಯಪೂರ್ಣವಾಗಿ
ಇಟ್ಟುಕೊಳ್ಳಬಹುದು.