‘ಮೌಲ್ಯ ಇರುವ (ಉಪಯುಕ್ತ) ಎಲ್ಲವನ್ನೂ ಹಳ್ಳಿಗಳಲ್ಲಿ ಉತ್ಪಾದಿಸಲಾಗುತ್ತಿದೆ ಎಂದಾದರೆ, ಹಳ್ಳಿಗಳು ಬಡತನ ದಲ್ಲಿ ಇರುವುದು ಏಕೆ? ನಗರಗಳು ಶ್ರೀಮಂತಿಕೆಯಿಂದ ತುಂಬಿರುವುದು ಹೇಗೆ’ ಎಂಬುದು ಲಿಯೊ ಟಾಲ್ಸ್ಟಾಯ್ ಅವರ ಪ್ರಶ್ನೆ. ಇದಕ್ಕೆ ಕಾರಣ ಅಸಂಘಟನೆ ಮತ್ತು ಮಾಹಿತಿಯ ಕೊರತೆ. ಇವು ರೈತರ ಬದುಕನ್ನು ಹಾಳುಗೆಡವುತ್ತಿವೆ. ಅಲ್ಲದೆ ಖರೀದಿದಾರರಿಗೆ ಏನು ಅಗತ್ಯ ಎನ್ನುವ ಅರಿವು ರೈತರಿಗಿಲ್ಲ. ಕೃಷಿಯನ್ನು ಸಾಂಪ್ರದಾಯಿಕ ರೀತಿಯಲ್ಲಿ ನಡೆಸುತ್ತಿರುವುದೂ ಕಾರಣವಾಗಿದೆ. ರೈತರ ಜೀವನ ಹಸನಾಗಲು ಅವರಿಗೆ ಮಾರುಕಟ್ಟೆಯಲ್ಲಿ ಬೆಲೆಗಳ ಏರಿಳಿತದ ಮಾಹಿತಿ, ಹವಾಮಾನದ ಮುನ್ಸೂಚನೆ, ಗ್ರಾಹಕರ ಅಭಿರುಚಿಗಳಲ್ಲಿನ ಬದಲಾವಣೆಯಂತಹ ಮಾಹಿತಿ ಸರಿಯಾಗಿ ಸಿಗಬೇಕು. ಸಹಕಾರಿ ತತ್ವದ ಅಡಿ ಉತ್ಪಾದಕ ಮತ್ತು ಮಾರಾಟ ಸಂಘಗಳನ್ನು ಸ್ವತಃ ರೈತರು ಏರ್ಪಡಿಸಿಕೊಳ್ಳಬೇಕು. ಸಹಕಾರಿ ಬೇಸಾಯ ಮತ್ತು ಸಮುದಾಯ ಕೃಷಿಗೆ ಸರ್ಕಾರ ಉತ್ತೇಜಿಸಬೇಕು. ಆಧುನಿಕ ಮೊಬೈಲ್ ಗ್ಯಾಜೆಟ್ ಬಳಸಿ ಗ್ರಾಹಕರೊಂದಿಗೆ ನೇರ ಮಾರಾಟ ವ್ಯವಸ್ಥೆ ನಿರ್ಮಿಸಿಕೊಳ್ಳಬೇಕು. ವಿದೇಶಿ ಮಾರುಕಟ್ಟೆಗೆ ಲಗ್ಗೆ ಹಾಕಿದರೆ ಫಲಿತಾಂಶ ಇನ್ನೂ ಉತ್ತಮ ಆಗಿರುತ್ತದೆ. ಅಮೆಜಾನ್, ಜೊಮ್ಯಾಟೊ ಇತ್ಯಾದಿಗಳು ತಾತ್ಕಾಲಿಕ ನೀರ್ಗುಳ್ಳೆಗಳು. ಕೊರೊನಾ ಸಂದರ್ಭದಲ್ಲಿ ನಗರಗಳಿಂದ ಗ್ರಾಮಗಳಿಗೆ ಹಿಂತಿರುಗಿ ಕೃಷಿ ಬದುಕಿಗೆ ಒಗ್ಗಿಕೊಂಡಿರುವುದು ಸಹಜತೆಗೆ, ಕಾಯಂ ವ್ಯವಸ್ಥೆಗೆ ನಿದರ್ಶನ.