ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹೊರರಾಜ್ಯಗಳಲ್ಲಿನ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿವೇತನವನ್ನು ಅನುದಾನದ ಕೊರತೆಯಿಂದ ಸ್ಥಗಿತಗೊಳಿಸಿದ್ದನ್ನು ತಿಳಿದು ಬೇಸರವಾಯಿತು. ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿನ ಕನ್ನಡ ಸ್ನಾತಕೋತ್ತರ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದ ಶಿಷ್ಯವೇತನವು ಅಧ್ಯಯನದ ಅವಧಿಯ ಖರ್ಚುವೆಚ್ಚವನ್ನು ಭರಿಸಲು ನೆರವಾಗುತ್ತದೆ. ಒಂದು ವೇಳೆ ಈ ಶಿಷ್ಯವೇತನವನ್ನು ಸ್ಥಗಿತಗೊಳಿಸಿದರೆ ವಿದ್ಯಾರ್ಥಿಗಳ ಕೊರತೆಯಿಂದಾಗಿ ಆ ರಾಜ್ಯಗಳಲ್ಲಿನ ಕನ್ನಡ ಸ್ನಾತಕೋತ್ತರ ವಿಭಾಗಗಳು ಮುಚ್ಚುವ ಹಂತ ತಲುಪುವ ಅಪಾಯವೂ ಇದೆ.